03 ಮೇ 2021

ಜನಕ_ ಆಮ್ಲಜನಕ .ಹನಿಗವನ


 


*ಜನಕ_ ಆಮ್ಲಜನಕ*


ಹೆತ್ತವಳು ನನ್ನಮ್ಮ ಕನಕ

ಬೆಳೆಸಿದವನು ನನ್ನ ಜನಕ|

ಬದುಕಲು ನನಗೀಗ ಬೇಕು

ಸ್ವಾಭಾವಿಕವೋ ಕೃತಕವೋ

ಆಮ್ಲಜನಕ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

02 ಮೇ 2021

ಕಾಲಾಯ ತಸ್ಮೈ ನಮಃ .ನ್ಯಾನೋ ಕಥೆ


 


ನ್ಯಾನೋ ಕಥೆ


*ಕಾಲಾಯ ತಸ್ಮೈ ನಮಃ*


ಅಂದೊಂದು ದಿನ "ನೀವು ಕೆಳ ಜಾತಿಯವರು ಅಗೋ ಅಲ್ಲಿದೆ ನೋಡು ಬ್ಯಾರೆ ತಟ್ಟೆ ,ಲೋಟ ತಗಾ ಊಟ ಹಾಕ್ತಾರೆ ಉಂಡು ,ತೊಳ್ದು ಅಲ್ಲೇ ಇಕ್ಕು ಅಂದಿದ್ದರು ಸಾಹುಕಾರ್.

ಇಂದು ಕರೋನ ಪಾಸಿಟಿವ್ ಬಂದ ಧಣಿಗಳಿಗೆ ತೋಟದ ಮನೆಯಲ್ಲಿ ಒಬ್ಬರನ್ನೇ ಇಟ್ಟು ದೂರದಿಂದಲೇ  ಊಟ ನೀಡಿ " ನಿಮ್ಮ ತಟ್ಟೆ ನೀವೇ ತೊಳೆದು , ಅಲ್ಲೇ ಇಟ್ಕೊಳ್ಳಿ ,ನಾಳೆ ತಂದು ಅದ್ರಲ್ಲೇ ಊಟ ಹಾಕ್ತೀನಿ" ಎಂದು ದೂರದಿಂದಲೇ ತಟ್ಟೆಗೆ ಚಪಾತಿ ಚಟ್ನಿ ಹಾಕಿ ಹೋದರು ಸಾಹುಕಾರ್ ಸೊಸೆ.


ದೂರದಿಂದ ಇದನ್ನು ನೋಡಿದ ಕೆಳ ವರ್ಗದ ಮಾರಪ್ಪ ,ಎಲ್ಲರಿಗೂ ಒಂದು ಕಾಲ ಬರುತ್ತೆ ಅಂತ ಯಾರೋ ಅಂದಿದ್ರು ಅದು ಇದೆನಾ? ಎಂದು ತನ್ನಲ್ಲೇ ಪ್ರಶ್ನೆ ಹಾಕಿಕೊಂಡನು....


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು



ವಿಲ್ .ನ್ಯಾನೋ ಕಥೆ


 



ನ್ಯಾನೋ ಕಥೆ


*ವಿಲ್*


ಮೂರು ಜನ ಗಂಡು ಮಕ್ಕಳು ಆಸ್ತಿಗೋಸ್ಕರ ಕಚ್ವಾಟ ಆಡುವುದನ್ನು ಕಂಡ ರಾಯರು " ನಾನು ಬದುಕಿರುವವರೆಗೂ 159ಕೋಟಿ ರೂ ನ ಈ ಆಸ್ತಿಯನ್ನು ಯಾರಿಗೂ ಹಂಚುವುದಿಲ್ಲ ನಾನು ವಿಲ್ ಮಾಡುವೆ " ಎಂದು ಖಡಾಖಂಡಿತವಾಗಿ ಹೇಳಿದರು.


ಹತ್ತು ವರ್ಷಗಳ ನಂತರ ಅನಾಥಾಶ್ರಮದಿಂದ ತಂದ ರಾಯರ ಪಾರ್ತೀವ ಶರೀರಕ್ಕೆ ಬೆಂಕಿ ಹಾಕಿದ ಮಕ್ಕಳು, ಬೆಂಕಿ ಇನ್ನೂ ಆರಿರಲಿಲ್ಲ,ಮನೆಗೆ ಬಂದು ವಿಲ್ ಹುಡುಕಿದರು...

ವಿಲ್ ಓದಿದ ಮಕ್ಕಳು ದಂಗಾದರು..

ವಿಲ್ ನಲ್ಲಿ ಈಗಿತ್ತು " ನನ್ನ ಎಲ್ಲಾ ಆಸ್ತಿಯು ಶ್ರೀ ವೆಂಕಟೇಶ್ವರ ಅನಾಥಾಶ್ರಮಕ್ಕೆ ಸೇರತಕ್ಕದ್ದು......



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಮಾತುಕತೆ .ನ್ಯಾನೋ ಕಥೆ


 


ನ್ಯಾನೋ ಕಥೆ 


*ಮಾತುಕತೆ*


ಇಬ್ಬರ ನಡುವಿನ ಕೋಪ ಕಡಿಮೆಯಾಗಿರಲಿಲ್ಲ ,

ನಾಲ್ಕು ದಿನವಾದರೂ ಒಬ್ಬರಿಗೊಬ್ಬರು ಕನಿಷ್ಠ ಮುಖವನ್ನು ಸಹ ನೋಡಿರಲಿಲ್ಲ ಮೊದಲಾಗಿದ್ದರೆ ಎಷ್ಟೇ ಜಗಳವಾಡಿದ್ದರೂ ಅರ್ಧಗಂಟೆಯೊಳಗೆ "ಯಾಕೋ ತಲೆ ನೋವು ಟೀ ಮಾಡು ಚಿನ್ನ" ಎಂದು ರವಿ ಕೇಳಿದಾಗ "ಬೇಕಾದ್ರೆ ಬಂದು ಮಾಡಿಕೊಂಡು ಕುಡಿ" ಎಂದು ಕರಗದ ಸಿಟ್ಟಿನಿಂದ ಹೇಳಿದರೂ ಹತ್ತು ನಿಮಿಷಗಳ ಬಳಿಕ ಬಂದು ನೊರೆ ಹಾಲಿನ ಕಾಫಿ ಕೊಟ್ಟ ಉಷಾ " ಹೇಗಿದೆ ಕಾಫಿ ಎಂದು ಮುಖ ಊದಿಸಿಕೊಂಡು " ಕೇಳುತ್ತಿದ್ದಳು " ಆಹಾ... ಅಮೃತ ಚಿನ್ನ" ....

ಈಗೆ ಮಾತುಕತೆ ಮುಂದುವರಿದು ಮೋಡ ಕವಿದ ವಾತಾವರಣವು ತಿಳಿಯಾಗಿ ಇಬ್ಬರ ಮನವೆಂಬ ಆಗಸ ಶುಭ್ರವಾಗುತ್ತಿತ್ತು .


ಆದರೆ ಈ ಬಾರಿ ಮುನಿಸು ನಾಲ್ಕು ದಿನಗಳಿಗಿಂತ ವಿಸ್ತರಿಸಿ ಮುಂದುವರೆದಿತ್ತು ,

ಅಂದು ಸಂಜೆ ಉಷಾಳ ತಂದೆ ಊರಿಂದ ಬಂದರು, ದಂಪತಿಗಳು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು . ಅವರಿಬ್ಬರೂ ಮುನಿಸು ಮರೆತು ಪರಸ್ಪರ ಮಾತನಾಡಲಾರಂಭಿಸಿದರು , ರಾತ್ರಿಯ ಊಟದ ಬಳಿಕ " ನನಗೆ ಪ್ರಯಾಣದ ಆಯಾಸ ಬೇಗ ಮಲಗುವೆ "ಎಂದು ರಾಯರು ಮಲಗಿದರು ನಾವೂ ಮಲಗುವೆವು ಎಂದು ಕೋಣೆಗೆ ಹೋದ ದಂಪತಿಗಳು ನಾಲ್ಕು ದಿನದಿಂದ ಆಡದೇ ಉಳಿದ ಮಾತುಗಳನ್ನು ಒಂದೇ ದಿನ ಮಾತನಾಡಿದರು ಅವರ ಜೊತೆ ಮಂಚವೂ ತುಸು ಜೋರಾಗಿಯೇ ಮಾತನಾಡುವ ಸದ್ದು ಹೊರಗೇನೂ ಕೇಳಿಸಲಿಲ್ಲ.......



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಪ್ರಜಾ ಪ್ರಗತಿ ೨/೫/೨೧