21 ಜನವರಿ 2021

ಮಾಡೋಣ ಧ್ಯಾನ ಕವನ


 *ಮಾಡೋಣ ಧ್ಯಾನ*


ಬಾಹ್ಯ ಸೌಂದರ್ಯದ

ಜೊತೆಗೆ ಆಂತರಿಕ ಸೌಂದರ್ಯ

ವೃದ್ದಿಗೊಳ್ಳಲು ನಾವೆಲ್ಲರೂ

ಮಾಡೋಣ ಧ್ಯಾನ.


ಆಧುನಿಕ ಜೀವನದಿ

ಅಡಿಗಡಿಗೆ ಒತ್ತಡ 

ಒತ್ತಡ ನಿವಾರಣೆಗೆ

ಮಾಡೋಣ ಧ್ಯಾನ.


ಮಾತೆತ್ತಿದರೆ ದೂರ್ವಾಸರು

ಕೋಪ ನಿಯಂತ್ರಣ

ಮಾಡಿಕೊಳ್ಳಲು

ಮಾಡೋಣ ಧ್ಯಾನ.


ಐಹಿಕ ಸುಖದಿ ಬಿದ್ದು

ಒದ್ದಾಡುವುದು ಸಾಕು

ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಲು

ಮಾಡೋಣ ಧ್ಯಾನ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

20 ಜನವರಿ 2021

ನೀನೂ ಅತ್ತೆಯಾಗುವೆ .ಕವನ

 

*ನೀನೂ ಅತ್ತೆಯಾಗುವೆ*


ಮುನಿಯಬೇಡ ನಿಂದಿಸಬೇಡ

ನೀ ನನ್ನ ಮಗನ ಮಡದಿ

ತೆಗಳಬೇಡ ಕೊಂಕುನುಡಿಯ

ಬೇಡ ನೀನಿರು ಮುದದಿ.


ಮಗನ ಚೆನ್ನಾಗಿ ನೋಡಿಕೊ

ಮೊಮ್ಮಕ್ಕಳ ಲಾಲಿಸು

ನಾ ಬಿದ್ದು ಹೋಗುವ ಮರ

ಹಿರಿಯರ ಮಾತನು ಪಾಲಿಸು.



ಪ್ರಾಯ  ಹೀಗೆ ಇರುವುದೆಂದು

ಭ್ರಮಿಸಿ ಹಿಗ್ಗಬೇಡ 

ಕೋಲಿಡಿಯುವ ಕಾಲ 

ನಿನಗೂ ಬರುವುದು ನೋಡಾ 


ಕೈಲಾಗದವಳು ಅಶಕ್ತೆ ಎಂದು

ಹಂಗಿಸಬೇಡ ಮತ್ತೆ ಮತ್ತೆ 

ಮುಂದೊಂದು ದಿನ

ನೀನೂ ಆಗೇ ಆಗುವೆ ಅತ್ತೆ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ಹನಿಗಳ ಲೀಲೆ .ಕವನ


 *ಹನಿಗಳ ಲೀಲೆ*


ಚುಮು ಚುಮು ಚಳಿಯಲಿ

ಬೆಳಗಿನ ವೇಳೆಯಲಿ

ಮಂಜಿನ ಹನಿಗಳ ಲೀಲೆ

ಮನಕೆ ನೀಡುವುದು ಮುದ.


ಗರಿಕೆಗಳ ಮೇಲಿನ ಹನಿಗಳು

ದಿನನ ಕಿರಣಗಳ ನೋಡಿ

ನಾಚಿ ಕಣ್ಮರೆಯಾಗುವುದನ್ನು

ನೋಡುವುದೇ ಅಂದ .


ಮರದಡಿಯಲಿ ನಲ್ಲೆಯ ಜೊತೆ

ನಿಂತಾಗ ,ಚಿಗುರೆಲೆಯ ಮೇಲಿನ ಹನಿಗಳು ಪನ್ನಿರಂತೆ ನಮ್ಮ ಮೇಲೆ

ಬಿದ್ದ ನೆನಪ ನೆನೆಯುವುದೇ ಚೆಂದ 


ಮಂಜಿನ ಹನಿಗಳ ಲೀಲೆಗಳು

ಒಂದೇ ಎರಡೇ? ನಮ್ಮ ಜೀವನಕೆ

ಸ್ಪೂರ್ತಿಯಾಗುವವು ಈ 

ಮಂಜಿನ ಹನಿಗಳು ಎಂದೆಂದೂ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


19 ಜನವರಿ 2021

ಬಲ್ಲವರಾರು?

 *ಒಳಿತಿಗೋ ಕೆಡುಕಿಗೋ?*


ಕಡಲಿನಾಟವ ಬಲ್ಲವರಾರು?

ಕಡಲ ಆಳವ ತಿಳಿದವರಾರು?


ಒಮ್ಮೊಮ್ಮೆ ಶಾಂತ

ಮರುಘಳಿಗೆ ರೌದ್ರ

ತೀರದಿ ತೀರದ ಅಲೆಗಳು.

ಆಳದಿ ಮುತ್ತು ರತ್ನಗಳ

ಸಂಪತ್ತುಗಳು.


ಜೀವನಾಧಾರದ ಮೂಲ

ಕೆಲವೊಮ್ಮೆ ಜೀವನವನ್ನೇ

ನಾಶ ಮಾಡುವ ಸುನಾಮಿಯ

ಕಾರಣಕರ್ತ .


ಅಗಾಧ ಜಲರಾಶಿಯ ನೆಲೆ 

ಒಂದಡೆ,ಕೊಂದು ಬಿಡುವೆ

ಜೀವರಾಶಿಗಳ ಕ್ಷಣಾರ್ಧದಲ್ಲಿ

ಇನ್ನೂಂದೆಡೆ, ಅರ್ಥವಾಗಿಲ್ಲ

ನನಗೀ ಕಡಲಿನಾಟ , 

ಒಳಿತಿಗೋ?ಕೆಡುಕಿಗೋ ?


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

17 ಜನವರಿ 2021

ಸೀಡಿ .ಹನಿ

 *ಸೀಡಿ*


ಇತ್ತೀಚಿಗೆ

ಕೆಲ ಶಾಸಕರು

ಹೇಳುತ್ತಿದ್ದಾರೆ

ನಮ್ಮ ಬಳಿ ಇದೆ

ಒಂದು ಸಿ. ಡಿ |

ಅದರ ಅರ್ಥ ಇಷ್ಟೇ

ನಮ್ಮನ್ನೂ ಸುಮ್ಮನೆ

ಮಂತ್ರಿಗಳಾಗಿ

ಮಾಡಿಬಿಡಿ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ