02 ಡಿಸೆಂಬರ್ 2017

ಗಜ಼ಲ್ ೧೨ (ಏಕೆ)

*ಗಜ಼ಲ್*


ಇದ್ದ ಒಲವ ತಿರಸ್ಕರಿಸಿ ಕಾಲ್ತೆಗೆದು ಹೋದೆ ಏಕೆ?
ಸವಿನೆನಪ ನನಗಿತ್ತು ಹೇಳದೇ ನೀ   ತೆರಳಿದೆ ಏಕೆ?

ಮಾತಿನಲಿ  ಮತ್ತು ಬರಿಸಿ  ನೋಟದಿ ಆಕರ್ಷಿಸಿ
ಮಾತಾಡದೇ ಮುನಿಸಿಕೊಂಡು ಹೊರಟೋದೆ ಏಕೆ?

ಕಡುಕಪ್ಪು ಹಸಿರೆಲೆಗಳು ಒಮ್ಮೆಲೇ ತರಗೆಲೆಗಳಾದವು
ಚೈತ್ರ ಬರುವ ಕಾಲದಿ ಆಷಾಡ ಬಂದಿದೆ ಏಕೆ?


ಕೆನೆಹಾಲು ಜೇನು ಸೇರಿದಂತಿತ್ತು ನಮ್ಮಯ ಒಲವು
ಜೇನಮುತ್ತುಗಳ ಮರೆತು ಏನೂ ಹೇಳದೆ ಹೋದೆ ಏಕೆ?

ಕಹಿಗುಳಿಗೆಯನಿತ್ತು ಸೀಜೀವಿಯ ಮನಕೆ ಘಾಸಿ ಮಾಡಿ
ಶಾಶ್ವತ ಗಾಯ ಮಾಡಿ ಕಾಣದೇ  ಮರೆಯಾದೆ ಏಕೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕನ್ನಡ ಸಾಹಿತ್ಯಕ್ಕೆ ಸಾಹಿತ್ಯ ಸಮ್ಮೇಳನಗಳ ಕೊಡುಗೆ ಎಷ್ಟು?

ಕನ್ನಡ ಸಾಹಿತ್ಯಕ್ಕೆ ಸಾಹಿತ್ಯ ಸಮ್ಮೇಳನಗಳ ಕೊಡುಗೆ ಎಷ್ಟು?

ಮೇಳ ಎಂದರೆ ಗುಂಪು ,ಜೊತೆ ಸೇರುವುದು. ಮುಂತಾದ ಅರ್ಥದಲ್ಲಿ ಬಳಸಲಾಗುತ್ತದೆ. ಸಮ್ಮೇಳನ ಒಂದು ಒಳ್ಳೆಯ ಉದ್ದೇಶದಿಂದ ಸೇರಿದ ಒಂದು ಕಾರ್ಯಕ್ರಮ ಎನ್ನಬಹುದು.
ಕನ್ನಡ ಸಾಹಿತ್ಯ ಸಮ್ಮೇಳನ ಈ ನಿಟ್ಟಿನಲ್ಲಿ ಒಂದು ಉತ್ತಮ ಕಾರ್ಯಕ್ರಮ.
ವಿಶ್ವೇಶ್ವರಯ್ಯ ರವರು ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಕ ಮಾಡಿದಾಗಿನಿಂದಲೂ ಈ ರೀತಿಯಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆದು ಕೊಂಡು ಬಂದಿವೆ .ಅವು ವಿಶ್ವ ,  ಅಖಿಲಭಾರತ, ಜಿಲ್ಲಾ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಇಂದಿಗೂ ನಡೆದು ಕೊಂಡು ಬರುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮ್ಮೇಳನದಲ್ಲಿ ನಡೆಯುವ ಕೆಲ ಅನಪೇಕ್ಷಣೀಯ ಬೆಳವಣಿಗೆಗಳು .ಸಾಹಿತ್ಯ ಸಮ್ಮೇಳನ ಅಸ್ತಿತ್ವವನ್ನು ಪ್ರಶ್ನಿಸುವಂತಾಗಿದೆ .
ಅಂದ ಮಾತ್ರಕ್ಕೆ ಸಮ್ಮೇಳನದಲ್ಲಿ ಕನ್ನಡದ ಕೆಲಸ ಆಗಿಲ್ಲ ಎಂದರೆ ಒಪ್ಪಲು ಸಾದ್ಯವಿಲ್ಲ.
ಪ್ರತಿ ಸಮ್ಮೇಳನದ ಹಿನ್ನೆಲೆಯಲ್ಲಿ ಹಲವಾರು ಕವಿಗಳ ಸಮ್ಮಿಳನ ಹೊಸ ಕವಿಮನಗಳಿಗೆ ಬರೆಯಲು ಪ್ರೇರಣೆ ನೀಡುವುದು ಸುಳ್ಳಲ್ಲ .ಸಮ್ಮೇಳನದ ಅಂಗವಾಗಿ ನಡೆವ ಪುಸ್ತಕ ಮಾರಾಟದ ಮತ್ತು ಪ್ರಕಾಶನ ಸಂಸ್ಥೆಗಳು ಕನ್ನಡ ಪುಸ್ತಕಗಳನ್ನು ಈಗ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಾಶನ ಮಾಡಿ ಮುದ್ರಿಸಿ ಮಾರುವಲ್ಲಿ ಸಮ್ಮೇಳನದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ .
ಇನ್ನೂ ಕವಿ ಗೋಷ್ಠಿ. ವಿವಾದ ಗೋಷ್ಟಿ, ಮುಂತಾದವು ನಮ್ಮ ಭಾಷೆ ನೆಲ ಜಲ ಮುಂತಾದ ವಿಷಯಗಳ ಬಗ್ಗೆ ಚಿಂತನ ಮಂಥನ ನಡೆಸುವುದು ಭಾಷೆಯ ಬೆಳವಣಿಗೆಗೆ ಪೂರಕವಾಗಿವೆ .
ಸಮ್ಮೇಳನದಲ್ಲಿ ತೆಗೆದುಕೊಂಡ ಕೆಲ ನಿರ್ಣಯಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗಿಲ್ಲ ಎಂಬ ಕೊರಗು‌ ಹಲವಾರು ಬಾರಿ ಕಾಡಿದೆ .ಅಂದ ಮಾತ್ರಕ್ಕೆ ನಿರ್ಣಯವನ್ನು ಅಂಗೀಕಾರ ಮಾಡುವುದು ಬೇಡ ಎಂದರೆ ಹೇಗೆ ಕೆಲವೊಮ್ಮೆ ನಾವು ಆ ದಿಕ್ಕಿನಲ್ಲಿ ಯೋಚಿಸಲು  ಸಹಾಯಕ ಮತ ಇದು ಪರೋಕ್ಷವಾಗಿ ನಮ್ಮ ಭಾಷೆ ,ನೆಲ ,ಜಲದ  ಅಭಿವೃದ್ಧಿಗೆ ಪೂರಕವಾಗಿರುವ ಉದಾಹರಣೆ ಇವೆ .
ಆದರೆ ಇತ್ತೀಚಿನ ಕೆಲ ಬೆಳವಣಿಗೆಯ ಗಮನಿಸಿ ನೋಡಿದರೆ ಸಾಹಿತ್ಯ ಸಮ್ಮೇಳನ ರಾಜಕೀಯ ಸಮ್ಮೇಳನ ಅಥವಾ ಒಂದು ರಾಜಕೀಯ ಪಕ್ಷಗಳ ಸಮಾವೇಶ ಅಥವಾ ಸಭೆ ಆಗಿ ಮಾರ್ಪಟ್ಟಿತೋ ಏನೋ ಎಂಬ ಅನಮಾನ ಕಾಡದಿರದು .ಸಾಹಿತಿಗಳು ಪಕ್ಷಾತೀತರಾಗಿರಬೇಕೆಂದು ನಮ್ಮ ಅಪೇಕ್ಷಿಸುವ ಮನಸು ನಮ್ಮದಲ್ಲ ಆದರೆ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ರಾಜಕೀಯವಾಗಿ ಬಳಸುವುದು ತಪ್ಪಲ್ಲವೇ ಹಾಗಂದ ಮಾತ್ರಕ್ಕೆ ಮುಂದಿನ ವರ್ಷಗಳಲ್ಲಿ ಸಮ್ಮೇಳನ ನಿಲ್ಲಿಸಿಬಿಡೋಣ ಎಂದರೆ ಮೂರ್ಖತನದ ಪರಮಾವಧಿ ಆಗುತ್ತದೆ ನಮ್ಮ ಮನೆಗಳಲ್ಲಿ ಚಿಕ್ಕ ಕಾರ್ಯಕ್ರಮ ಮಾಡಿದಾಗ ಬಂಧುಗಳು ,ಸ್ನೇಹಿತರು ಮತ್ತು ಹಿತೈಷಿಗಳು ಪಾಲ್ಗೊಂಡು ನಮ್ಮ ಸಂಬಂದ ಗಳು ಗಟ್ಟಿಯಾಗಿ ಮನಸಂತೋಷವಾಗುತ್ತದೆ ಅಂತಹ ಚಿಕ್ಕ ಕಾರ್ಯಕ್ರಮ ದಲ್ಲಿಯೂ ಕೆಲವು ಎಡವಟ್ಟು ಆಗಿರುತ್ತದೆ ಅಂದರೆ ಮುಂದೆ ಹಬ್ಬ .ಜಾತ್ರೆ, ಕಾರ್ಯ ಕ್ರಮ ಮಾಡದೇ ಇರುತ್ತೇವೆಯೇ?
ಇನ್ನೂ ಮುಂದಾದರೂ   ನಮ್ಮ ನಾಡು ನುಡಿ ಹಬ್ಬಗಳನ್ನು ಮತ್ತು ಸಾಹಿತ್ಯ ಸಮ್ಮೇಳನ ಮಾಡುವಾಗ ಸಾಹಿತ್ಯ ಮತ್ತು ಸಾಹಿತ್ಯ ಸಂಬಂಧಿಸಿದ ಚಟುವಟಿಕೆಗಳನ್ನು ಮಾತ್ರ ಹಮ್ಮಿಕೊಂಡು ಮುನ್ನೆಡದರೆ ಖಂಡಿತ ಕನ್ನಡ ಸಾಹಿತ್ಯ ಸಮ್ಮೇಳನದ ಸಾರ್ಥಕ ಆಚರಣೆಯಾಗುವುದರಲ್ಲಿ ಸಂದೇಹವಿಲ್ಲ.

ವಂದನೆಗಳೊಂದಿಗೆ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

ನ್ಯಾನೋ ಕಥೆ (ಮುಖ ಪುಸ್ತಕ)

*ನ್ಯಾನೋ ಕಥೆ*

*ಮುಖ ಪುಸ್ತಕ*

ಡಿಗ್ರಿ ಮುಗಿಸಿ ಕೆಲಸವಿಲ್ಲದೇ ಊರಲ್ಲೇ ಇದ್ದ ಮಗ ಸತೀಶ್ ಕುರಿತು ಅಪ್ಪ "ಯಾವಾಗಲೂ ಪೇಸ್ಬಕ್ ವಾಟ್ಸಪ್ ನಲ್ಲಿ ಮುಳುಗಿರ್ತಿಯಾ ಇಲ್ಲಾ ಹೊಲದ ಕಡೆ ಬತ್ತಿಯಾ?" ಎಂದು ಗೊಣಗುತ್ತ ಹೊಲದತ್ತ ಹೆಜ್ಜೆ ಹಾಕಿದರು.ಸತೀಶ್ ನಿಗೆ ಫೇಸ್ ಬುಕ್ ಒಂದು ಪೋಸ್ಟ್ ನೋಡಿ ಆಶ್ಚರ್ಯ ಮತ್ತು ಆನಂದವಾಗಿ ಅದರ ವಿಳಾಸ ಹಡುಕಿಹೋದಾಗ ಅಲ್ಲಿದ್ದ ಎರಡು ಎಮ್ಮೆಗಳು ಐದು ದಿನದ ಹಿಂದೆ ಕಳೆದುಹೋಗಿ  ಅವರ ತಂದೆ ಮತ್ತು ಅವನು ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ .ಪೇಸ್ ಬುಕ್ ಪೋಸ್ಟ್ ಮಾಡಿದ ಗೆಳಯನಿಗೆ ಕೃತಜ್ಞತೆ ಹೇಳಿ ಎಮ್ಮೆಗಳೊಂದಿಗೆ ಮನೆಗೆ ಬಂದ. ಸಂಜೆ ಹೊಲದಿಂದ ಮನೆಗೆ ಹಿಂತಿರುಗಿದ ಮೇಲೆ ತಂದೆಗೆ  ವಿಷಯ ತಿಳಿದು ಎಮ್ಮೆಗಳ ಕಂಡು ಮಗನ "ಮುಖ"ವನ್ನು ಹೆಮ್ಮೆಯಿಂದ ನೋಡಿದರು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 ಡಿಸೆಂಬರ್ 2017

ಪೋಷಕರೇ ಹದಿಹರೆಯದವರ ಜೊತೆ ಸ್ನೇಹಿತರಾಗಿರಿ (ಲೇಖನ)

ಲೇಖನ*
*ಹದಿಹರೆಯದವರೊಂದಿಗೆ ಸ್ನೇಹದಿಂದಿರಿ*
"ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು"ಎಂದು ಕವಿಗಳ ವಿವರಿಸಿರುವಂತೆ ಕಿಶೋರಾವಸ್ಥೆ ಅಥವಾ ಹದಿಹರೆಯದ ಮಕ್ಕಳು ಅವರ ವರ್ತನೆಗಳು ಮತ್ತು ಅವರ ಭಾವನೆಗಳು ತಾಕಲಾಟ ಆಡುವ ಸಮಯ ಅದಕ್ಕೆ ಮನಶಾಸ್ತ್ರಜ್ಞರು ಈ ಕಾಲವನ್ನು ಸಂಕ್ಷೋಬೆಯ ಕಾಲ ಎಂದಿದ್ದಾರೆ.
ಇಂತಹ ಕಾಲದಲ್ಲಿ ಮನೆಯಲ್ಲಿ ಪೋಷಕರು ಹದಿಹರೆಯದವರ ಜೊತೆ ಸಂಘರ್ಷಕ್ಕೆ ಇಳಿಯುವ ಬದಲು ಈ ಕೆಳಗಿನ ಅಂಶಗಳನ್ನು ಪಾಲಿಸಿ ಅವರೊಂದಿಗೆ ಸ್ನಹದಿಂದಿರಲು ಮನಶಾಸ್ತ್ರಜ್ಞರು ಹೇಳುತ್ತಾರೆ.
ಹಾಗಾದರೆ ಅವರೊಂದಿಗೆ ಸ್ನೇಹದಿಂದಿರುವುದು ಹೇಗೆ ?
1 ಗೌರವ ತೋರಿ :
     ಆಗ ತಾನೆ ಬಾಲ್ಯಾವಸ್ಥೆಯ ಹಂತ ದಾಟಿ ಕಿಶೋರಾವಸ್ಥೆ ತಲುಪಿದ ಈ ಮಕ್ಕಳು ಗೌರವ ಅಪೇಕ್ಷಿಸುವರು ,ಈ ಹಂತಗಳಲ್ಲಿ ಅವರು ಅವರ ಶಿಕ್ಷಣ, ಕೆಲಸ ಮುಂತಾದ ವಿಷಯಗಳಲ್ಲಿ ಕೆಲ ನಿರ್ಧಾರ ಕೈಗೊಂಡರೆ ಅವರ ತೀರ್ಮಾನಕ್ಕೆ ಗೌರವ ನೀಡಬೇಕು. ಕೆಲವೊಮ್ಮೆ ಅವರ ತಪ್ಪು ನಿರ್ಧಾರದಿಂದ ಬೇಸರಪಟ್ಟುಕೊಂಡಾಗ ಅವರ ಸಮಸ್ಯೆ ಬಗೆಹರಿಸಲು ಸ್ನೆಹಿತನಂತೆ ವರ್ತಿಸಿ.
2 .ಅವರ ಗೆಳತನ ಸ್ವೀಕರಿಸಿ :
ಹದಿಹರೆಯದವರು ತಮಗೆ ಇಷ್ಟವಾದ ಗೆಳೆಯ ಗೆಳತಿಯರೊಂದಿಗೆ ಕಾಲ ಕಳೆಯಲು‌ ಇಷ್ಟ ಪಡುವರು ನೀವು ಇದನ್ನು ವಿರೋದಿಸಿದರೆ ಮನೆಯಲ್ಲಿ ದೊಡ್ಡ ರಾದ್ದಾಂತವೇ ನಡೆಯಬಹುದು ಅದರ ಬದಲಾಗಿ ಕೆಲ ಸಲಹೆಗಳನ್ನು ನೀಡಿ ಅವರ ಗೆಳೆತನ ಸ್ವೀಕರಿಸಿ. ಈ ವೇಳೆ ನಿಮ್ಮ ಮಕ್ಕಳು ಮನೆಯಿಂದ ಹೊರಗಿದ್ದರೆ ನಿಮಗೆ ಪ್ರತಿದಿನ ಕರೆ ಮಾಡಿ ಮಾತಾಡುವುದನ್ನು ಕಡಿಮೆ ಮಾಡಿ ಗೆಳೆಯ ರೊಡನೆ ಮಾತಾಡುವುದನ್ನು ಗಮನಿಸಿ ಹೆಚ್ಚು ತಲೆಕೆಡಿಸಿಕೊಳ್ಖಬೇಡಿ ಅವರ ಭಾವನೆಗಳನ್ನು ಗೌರವಿಸಿ ಕ್ರಮೇಣ ನಿಮ್ಮ ಮಗ ಅಥವಾ ನಿಮ್ಮ ಮಗಳು ನಿಮ್ಮ ಮೇಲೆ ಗೌರವ ಬೆಳೆಸಿಕೊಳ್ಳುವರು.
3 ಅವರ ಆಸಕ್ತಿಗಳನ್ನು ಬೆಂಬಲಿಸಿ :
ಮೊದಲು ಕೇವಲ ನಿಮ್ಮ ಏರಿಯಾದ ಗಲ್ಲಿಗಳಲ್ಲಿ ಆಟವಾಡುತ್ತಿದ್ದ ನಿಮ್ಮ ಮಗ ಅಥವಾ ಮಗಳು
ಕ್ರಮೇಣ ಹೊಸ ಹೊಸ ಆಟಗಳು ಮತ್ತು ಸಾಹಸ ಚಟುವಟಿಕೆಗಳನ್ನು ಹೊಂದಲು ಬಯಸುವರು ಈ ಹಂತಗಳಲ್ಲಿ ಪೋಷಕರಾದವರು ಅವರ ಆಸಕ್ತಿಗಳಿಗೆ ತಣ್ಣೀರೆರಚದೆ ಸ್ನೇಹಿತನಂತೆ ಬೆಂಬಲಿಸಿದರೆ ನಿಮ್ಮ ಸಂಬಂಧ ವೃದ್ಧಿಸಲು ಮತ್ತು ಅವರ ಆಸಕ್ತಿ ಕ್ಷೇತ್ರ ಬೆಳೆಯಲು ಪೂರಕವಾಗುವುದು .
4  ಅವರೊಂದಿಗೆ ಸಂಪರ್ಕ ಸಾದಿಸಿ :
ಹದಿಹರೆಯದವರ ಜೊತೆ ಸಾಧ್ಯವಾದಷ್ಟು ಸಂಪರ್ಕ ಸಾಧಿಸಲು ಪ್ರಯತ್ನ ಪಡಬೇಕು ಇಂದಿ ಆಧುನಿಕ ಯಾಂತ್ರಿಕ ಯುಗದಲ್ಲಿ ನಿಮಗೆ ಸಮಯದ ಅಭಾವದಿಂದ ವಾರಗಟ್ಟಲೆ  ಮನೆಯಿಂದ ಹೊರಗೆ ಇರಬೇಕಾದ ಸಂದರ್ಭಗಳಲ್ಲಿ ಇಂತಹ ಮಕ್ಕಳೊಂದಿಗೆ ಯಾವುದೇ ವಿಧದಲ್ಲೂ ಸಂಪರ್ಕ ಸಾಧಿಸಬಹುದು ಅದು .ವಾಟ್ಸಪ್, ಆಗಬಹುದು, ಕಾಲ್ ಮಾಡಬಹುದು, ಕೊನೆಯಪಕ್ಷ ಎಸ್ ಎಂ ಎಸ್ ಆದರೂ ಆದೀತು ಇದು ಅವರೊಂದಿಗಿನ ಭಾವನಾತ್ಮಕ ಸಂಬಂಧವನ್ನು ವೃದ್ಧಿಸಲು ಮತ್ತು ಒಂಟಿತನ ನಿವಾರಿಸಲು ಸಹಾಯಕ.
5  ನಿಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಹೇರಬೇಡಿ :
ಇದು ಬಹುತೇಕ ಎಲ್ಲಾ ಪೋಷಕ ಮಿತ್ರರು ಮಾಡುವ ತಪ್ಪು ,ತಮ್ಮಿಂದ ಯಾವ ಕಾರ್ಯ ಮಾಡಲಾಗಲಿಲ್ಲ ಅದನ್ನು ನನ್ನ ಮಗ ಅಥವಾ ಮಗಳು ಮಾಡಲಿ‌ಎಂಬ ಸಹಜ ಆಸೆ ಜೊತೆಗೆ ಅನಗತ್ಯವಾಗಿ ಪದೇ ಪದೇ ನೀನು ಇದೇ ಆಗಬೇಕೆಂದು ಒತ್ತಡ ಹೇರುವುದು. ಇದು ಹದಿಹರೆಯದವರ ಮೇಲೆ ಪ್ರತಿಕೂಲವಾದ ಪರಿಣಾಮವನ್ನು ಬೀರಿ ಅವರ ಸಹಜ ಪ್ರತಿಭೆ ಹೊರಬರಲು ಅಡ್ಡಿಯಾಗುವುದು .ಆದ್ದರಿಂದ ಅವರಿಗೆ ಸಲಹೆ ನೀಡಿ ಸ್ವೀಕರಿಸಿದಿದ್ದರೆ ಬೇಸರಿಕೊಳ್ಳದೇ ಹಿಂಜರಿಯಿರಿ ಪ್ರತಿಷ್ಠೆ ಬೇಡ
ಮುಂದೆ ಅವರೇ ಪಾಠಗಳನ್ನು ಕಲಿಯಲು ಅವಕಾಶ ನೀಡಿ.
ಈ ಮೇಲ್ಕಂಡ ಅಂಶಗಳನ್ನು ಗಮನಿಸಿ ನಮ್ಮ ಹದಿಹರೆಯದವರ ಪಾಲನೆ ಪೋಷಣೆಯಲ್ಲಿ ಅವರನ್ನು ಸ್ನೇಹಿತರ ರೀತಿಯಲ್ಲಿ ನಡೆಸಿಕೊಂಡರೆ ಕ್ಷೋಭೆ ಯ ಹಂತದ ಈ ಪ್ರಮುಖ ಘಟ್ಟ ದಾಟಿ ನಮ್ಮ ಮಕ್ಕಳು ಜವಾಬ್ದಾರಿ ಪ್ರಜೆಗಳಾಗುವುದರಲ್ಲಿ ಸಂದೇಹವಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ವಸುಧೈವಕುಟುಂಬಕಂ* (ಕವನ)

*ವಸುಧೈವಕುಟುಂಬಕಂ*

ಹಚ್ಚಿಬಿಡೋಣ  ಸ್ನೇಹದ ದೀಪ
ಅಳಿಸಿಬಿಡೋಣ  ದ್ವೇಷದ ಶಾಪ||

ಜಾತಿ ಮತದ ಕೊಳೆ ತೊಳೆದು
ಮೇಲು ಕೀಳಿನ ತರತಮ ಜರಿದು
ಅಸಹಿಷ್ಣುತೆಯ ವಾದ  ತೊಡೆದು
ಎಲ್ಲರೂ ಸ್ನೇಹದ ದೀಪ ಹಚ್ಚೋಣ||

ನಗುವುದ ಎಲ್ಲರಿಗೂ ಕಲಿಸೋಣ
ನಗುತಾ ನಲಿಯುತ ಬಾಳೋಣ
ಮಗುವಿನ ನಗುವ ಕಲಿಯೋಣ
ನಾವು ನಗುವಿನ ದೀಪ ಹಚ್ಚೋಣ||

ಗಡಿಗಳ ಗೊಡವೆ ಬಿಡೋಣ
ಪ್ರತ್ಯೇಕತೆ ಕೂಗು ತಡೆಯೋಣ
ವಿಶ್ವಮಾನವತೆ ತತ್ವ ಸಾರೋಣ
ವಸುಧೈವಕುಟುಂಬಕಂ ಎನ್ನೋಣ||

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*