25 ಜನವರಿ 2025

ಕುಣಿಯೋಣ ಬಾರ .ಹನಿಗವನ


 

#ಹನಿಗವನ

#ಕುಣಿಯೋಣುಬಾರ

ಸೋಮವಾರದಂದು ಕೆಲಸಕ್ಕೆ ಹೋಗಲು ಮನಸ್ಸು ಭಾರ। ಶನಿವಾರ,ಭಾನುವಾರವಾದರೆ ಮನ ಹೇಳುವುದು ಕುಣಿಯೋಣ ಬಾರ॥

ಸಿಹಿಜೀವಿ ವೆಂಕಟೇಶ್ವರ

#sihijeeviVenkateshwara
#ಕವನ #kavana #kannada #poem

22 ಜನವರಿ 2025

ಪ್ರತಿ ವಸ್ತು, ಜೀವಿ ಅಮೂಲ್ಯ.


 ಪ್ರತಿ ವಸ್ತು, ಜೀವಿ ಅಮೂಲ್ಯ.


ಸಾಮಾನ್ಯವಾಗಿ ನಾವೆಲ್ಲರೂ ಚೆನ್ನಾಗಿರುವ ವಸ್ತುಗಳನ್ನು ಬಳಸುತ್ತೇವೆ.ಸ್ವಲ್ಪ ಹಳತಾದ ಒಡೆದ ವಸ್ತುಗಳನ್ನು ಬಳಸುವುದೇ ಇಲ್ಲ. ಇದು ಮಾನವರ ವಿಷಯದಲ್ಲೂ ಅಷ್ಟೇ ಚೆನ್ನಾಗಿ ದುಡಿಯುತ್ತಿರುವವರಿಗೆ ಬೆಲೆ ಸ್ವಲ್ಪ ದಕ್ಷತೆ ಕಡಿಮೆಯಾದರೆ ಇನ್ನೆಲ್ಲಿಯ ನೆಲೆ? ಗೇಟ್ ಪಾಸ್ ಸಿದ್ದ.


ಒಬ್ಬ  ಮಹಿಳೆ ಎರಡು ದೊಡ್ಡ ಮಡಿಕೆಗಳಿಂದ ದಿನವೂ ತನ್ನ ಮನೆಗೆ ದೂರದ ಹೊಳೆಯಿಂದ  ನೀರು ತರುತ್ತಿದ್ದಳು. ಒಂದನ್ನು ತಲೆಯ ಮೇಲೆ ಮತ್ತೊಂದನ್ನು ಕಂಕುಳಲ್ಲಿ ಇಟ್ಟುಕೊಂಡು ನೀರು ತರುವ ಕಾರ್ಯ ಮುಂದುವರೆದಿತ್ತು.

ಅವಳು ಕಂಕಳುಲ್ಲಿಟ್ಟುಕೊಂಡ  ಮಡಿಕೆಯಲ್ಲಿ ಬಿರುಕು ಇತ್ತು.ತಲೆ ಮೇಲಿನ  ಮಡಿಕೆ ಚೆನ್ನಾಗಿತ್ತು ಆ ಮಡಿಕೆಯಿಂದ ಹಳ್ಳದ  ನೀರು ಪೂರ್ಣ ಪ್ರಮಾಣದಲ್ಲಿ ಮನೆ ಸೇರುತ್ತಿತ್ತು. ಬಿರುಕು ಬಿಟ್ಟ ಮಡಿಕೆಯಿಂದ ಅರ್ಧದಷ್ಟು ಮಾತ್ರ ನೀರು ಮನೆಗೆ ತಲುಪುತ್ತಿತ್ತು.


ಹೀಗೆ ದಿನಗಳುರುಳಿದವು. ಎರಡು ವರ್ಷಗಳ ಕಾಲ ಆಕೆ ಇದು ಪ್ರತಿದಿನವೂ  ಮನೆಗೆ ಕೇವಲ ಒಂದೂವರೆ ಮಡಿಕೆ ನೀರು ತರುತ್ತಿದ್ದಳು.

ತಲೆ ಮೇಲಿರುತ್ತಿದ್ದ ಮಡಿಕೆಯು  ತನ್ನ ಪೂರ್ಣ ನೀರು ತರುವ  ಸಾಧನೆಯ  ಬಗ್ಗೆ ಹೆಮ್ಮೆಪಡುತ್ತಿತ್ತು. ಆದರೆ  ಬಿರುಕು ಬಿಟ್ಟ ಮಡಿಕೆಯು ತನ್ನ ಅಪೂರ್ಣತೆಯ ಬಗ್ಗೆ ನಾಚಿಕೆಪಡುತ್ತಾ  ದುಃಖದಲ್ಲಿತ್ತು.

ಅದು ಒಂದು ದಿನ ಹೊಳೆಯ ಬಳಿ ಆ ಮಹಿಳೆಯೊಂದಿಗೆ ತನ್ನ ‌ನೋವನ್ನು ವಿವರಿಸಿ "ನೀವೇಕೆ ನನ್ನ ಅರ್ಧ ತುಂಬಿದ ನೀರಿಗಾಗಿ ನನ್ನ ಬಳಸುವಿರಿ.ಮತ್ತೊಂದು ಪೂರ್ಣ ಮಡಿಕೆ ಪಡೆದು ನನಗೆ ವಿಶ್ರಾಂತಿ ನೀಡಿ" ಎಂದಿತು.

ಈ ಮಾತುಗಳನ್ನು ಕೇಳಿದ ಮಹಿಳೆ ನಗುತ್ತಾ 

 "ನಾನು ನೀರು ತರುವ  ದಾರಿಯ ಒಂದು ಬದಿಯಲ್ಲಿ ಹೂವುಗಳಿವೆ, ಆದರೆ ಇನ್ನೊಂದು  ಬದಿಯಲ್ಲಿ ಹೂವಿಲ್ಲ  ಗಮನಿಸಿದ್ದೀಯಾ? 

ನೀನು‌ ಒಡೆದ ಮಡಿಕೆ ಎಂಬ ಕೀಳರಿಮೆ ಬಿಡು. ನಾನು ನಿನ್ನ ಹಾದಿಯ ಬದಿಯಲ್ಲಿ ಹೂವಿನ ಬೀಜಗಳನ್ನು ನೆಟ್ಟಿದ್ದೇನೆ.  ನಾವು ಹೊಳೆಯಿಂದ  ಹಿಂತಿರುಗುವಾಗ ಪ್ರತಿದಿನ ನೀನು ನಿನಗರಿವಿಲ್ಲದೇ ಅವುಗಳಿಗೆ ನೀರು ಹಾಕುತ್ತೀದ್ದೀಯ.ಈ ಎರಡು ವರ್ಷಗಳಿಂದ ನಾನು ಈ ಸುಂದರವಾದ ಹೂವುಗಳನ್ನು ದೇವರ ಪೂಜೆಗೆ ಬಳಸುತ್ತಿದ್ದೇನೆ" ಎಂದಳು.  ಒಡೆದ ಮಡಿಕೆ ಸಾರ್ಥಕ ಭಾವದಿಂದ ಮಹಿಳೆಗೆ ಧನ್ಯವಾದಗಳನ್ನು ಅರ್ಪಿಸಿತು.

ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮದೇ ಆದ ಶಕ್ತಿ ಇರುವಂತೆ ಬಲಹೀನತೆಯು ಇವೆ. ಜೀವ ವೈವಿಧ್ಯತೆ ಜಗದ ನಿಯಮ. ಅಶಕ್ತರು, ಅಸಹಾಯಕರು,ಕೆಲಸಕ್ಕೆ ಬಾರದವರು ಎಂದು ಯಾರನ್ನೂ ನಾವು ಹೀಗಳೆದು ಅವರಿಂದ ಏನೂ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಬಾರದು.ಈ ಜಗದ ಪ್ರತಿ ವಸ್ತು ಹಾಗೂ  ಜೀವಿಯೂ ಅನನ್ಯ, ವಿಶೇಷ, ವಿಭಿನ್ನ ಮತ್ತು ಅಮೂಲ್ಯ ಅಲ್ಲವೆ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 

17 ಜನವರಿ 2025

ಹೇಳಿದಂತೆ ಕೇಳುವ ದುಬಾರಿ ಗರ್ಲ್ ಫ್ರೆಂಡ್


 


ಹೇಳಿದಂತೆ ಕೇಳುವ ದುಬಾರಿ ಗರ್ಲ್ ಫ್ರೆಂಡ್.


 ಇನ್ನು ಮುಂದೆ ಯಾರೂ ಕೂಡ ತನಗೆ  ಪ್ರಿಯತಮೆ ಇಲ್ಲವೆಂದು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ನೀವು ಬಯಸಿದಂತೆಯೇ ನಿಮ್ಮೊಂದಿಗಿರುವ ರೋಬೋ ಪ್ರಿಯತಮೆ ಬರುತ್ತಾಳೆ! ಆದರೆ 

ನಿಮ್ಮ ಪರ್ಸ್ ಗಟ್ಟಿಯಾಗಿರಬೇಕಷ್ಟೇ.

ಈ ತಂತ್ರಜ್ಞಾನ ಯುಗದಲ್ಲಿ ಇಂತದೊಂದು ಸುದ್ದಿಯನ್ನು ನಂಬಬೇಕೋ ಬೇಡವೋ ಎಂದು ವಿಚಾರ ಮಾಡುವ ಅಗತ್ಯವಿಲ್ಲ. ನಂಬಲೇಬೇಕು. ಏಕೆಂದರೆ, ಇದು AI ಯುಗ ಸ್ವಾಮಿ! ಈ ವರ್ಷದ CES-2025 ಪ್ರದರ್ಶನದಲ್ಲಿ ಈ ಸಾಧ್ಯತೆ ಕಣ್ಣ ಮುಂದೆ ಬಂದಿದೆ.


ಈ ಪ್ರದರ್ಶನದಲ್ಲಿ ಒಂದು ಗಮನಾರ್ಹವಾದ ಆವಿಷ್ಕಾರವನ್ನು Realbotix ಎಂಬ ಕಂಪನಿ ಮಾನವನ ರೀತಿಯ ವಾಸ್ತವಿಕ ಕೃತಕ ಬುದ್ದಿಮತ್ತೆ (AI) ಗೆಳತಿಯನ್ನು ಸಿದ್ದಪಡಿಸಿದೆ. ಇವಳ ಹೆಸರು Aria. ಈ AI ರೋಬೋಟ್ ಅನ್ನು ಸ್ತ್ರೀ ಒಡನಾಡಿಯಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.


ವರದಿಯ ಪ್ರಕಾರ ರೋಬೋಟ್‌ನ ಬೆಲೆ ಅಂದಾಜು 1.5 ಕೋಟಿ Aria ವಾಸ್ತವಿಕ ಮಾನವ ಲಕ್ಷಣಗಳು ಮತ್ತು ಮುಖದ ಅಭಿವ್ಯಕ್ತಿಗಳಿಗೆ ಹೋಲಿಕೆಯಾಗುವಂತಿದೆ. ಅಲ್ಲದೆ, Aria ವನ್ನು ನಮಗೆ ಬೇಕಾದಂತೆ ಕಸ್ಟಮೈಸ್ ಮಾಡಬಹುದು. ಬಳಕೆದಾರರು ಅದರ ಬಣ್ಣ, ಮುಖ, ಕೂದಲಿನ ಬಣ್ಣವನ್ನು ಸಹ ಬದಲಾಯಿಸಬಹುದು. ಈ AI ಪ್ರಿಯತಮೆಯ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಕಸ್ಟಮೈಸಬಿಲಿಟಿ, ಸಾಮಾಜಿಕ ಬುದ್ದಿಮತ್ತೆ ಮತ್ತು ವಾಸ್ತವಿಕ ಮಾನವ ವೈಶಿಷ್ಟ್ಯಗಳ ಅನ್ನೋನ್ಯತೆ ಮತ್ತು ಒಡನಾಟವನ್ನೂ ಹೊಂದಿದೆ.


ಕೃತಕ ಗರ್ಭಾಶಯ  ಶೀಘ್ರದಲ್ಲೇ ಅಳವಡಿಸಲಾಗುವುದಂತೆ. ಇನ್ನು...ಪ್ರಿಯತಮೆ ಹೇಳಿದಂತೆ ಕೇಳುವುದಿಲ್ಲ. ತನ್ನನ್ನು ಕಾಳಜಿ ಮಾಡುವುದಿಲ್ಲ ಎಂಬ ದೂರುಗಳು ದೂರಾಗಬಹುದೇನೋ! 


ಸಿಹಿಜೀವಿ ವೆಂಕಟೇಶ್ವರ.


14 ಜನವರಿ 2025

ಮಕರ ಸಂಕ್ರಾಂತಿಯ ಪುರಾಣ ಐತಿಹ್ಯ*




*ಮಕರ ಸಂಕ್ರಾಂತಿಯ ಪುರಾಣ ಐತಿಹ್ಯ* 


1) ಈದಿನ ಭಗೀರಥನು ತಪಸ್ಸು ಮಾಡಿ ಶಿವನ ಜಟೆಯಿಂದ ಗಂಗೆಯನ್ನು ಭೂಮಿಗೆ ತಂದ ದಿನ,


2) ಮಹಾಭಾರತದ ಆದಿಪರ್ವದಲ್ಲಿ, ದಕ್ಷಪ್ರಜಾಪತಿಯ ಮಗಳು ವಸುವಿನ ಎಂಟು ಮಕ್ಕಳಾದ ಧರ, ಧ್ರುವ, ಸೋಮ, ಅಹ, ಅನಿಲ, ಅನಲ, ಪ್ರತ್ಯೂಷ, ಪ್ರಭಾಸ ಎಂಬ ಇವರು ಒಮ್ಮೆ ವಸಿಷ್ಠ ಮಹರ್ಷಿಯ ಆಶ್ರಮದಲ್ಲಿ ಸಂಚರಿಸುತ್ತ, ನಂದಿನೀ ಧೇನುವನ್ನು ಕದ್ದೊಯ್ಯಲು ಹವಣಿಸಿ, ವಸಿಷ್ಠರಿಂದ ಶಾಪಗ್ರಸ್ತರಾಗಿ ಭೂಲೋಕದಲ್ಲಿ ಶಂತನುವಿನ ಹೆಂಡತಿ ಗಂಗೆಯ ಅಷ್ಟ ಮಕ್ಕಳಾಗಿ ಹುಟ್ಟಿದರು. 


ಹಿರಿಯವನಾದ ಧರನೇ ಭೀಷ್ಮನಾಗಿ ಜನ್ಮವೆತ್ತಿದ. ಈದಿನ ಭೀಷ್ಮರ ಆತ್ಮವು ಶರಶಯ್ಯಯಿಂದ ದೇಹತ್ಯಾಗ ಮಾಡಿ ಶಾಪದಿಂದ ವಿಮೋಚನೆ ಆದ ದಿನ


3) ಈದಿನ ಭಾಗಿರತಿಯು ಕಪಿಲರ ಆಶ್ರಮದಲ್ಲಿ ಸುಟ್ಟು ಕರಕಲಾಗಿ ಭೂದಿಯಾದ ಸಗರನ ಒಂದು ಸಾವಿರ ಮಕ್ಕಳ ಅಸ್ಥಿಗಳು ಗಂಗೆಯಲ್ಲಿ ಸಂಚಯನವಾಗಿ ಮೋಕ್ಷ ಹೊಂದಿದ ದಿನ 


4) ಈದಿನ ಗಂಗೆಯು ಸಾಗರ ಸೇರಿದ ದಿನ.


5) ಈ ದಿನ ಸೂರ್ಯ ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಉತ್ತರಾಯಣ ಪುಣ್ಯಕಾಲದ ಪರ್ವದಿನ, ಆಸ್ಥೀಕರು ಸೂರ್ಯನನ್ನು ಪ್ರಾರ್ಥಿಸುತ್ತಾರೆ.


6) ಈದಿನ ಆಸ್ತಿಕರು ಗಂಗಾ , ಯಮುನಾ , ಗೋದಾವರಿ , ಕೃಷ್ಣ ಮತ್ತು ಕಾವೇರಿ ನದಿಗಳಲ್ಲಿ, ಪುಣ್ಯ ನದಿಗಳ ಸಂಗಮ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನ ಮಾಡಿ  ತರ್ಪಣಾದಿ ಪಿತೃ ಕಾರ್ಯ ಮಾಡಿದರೆ ಪಾಪ ವಿಮೋಚನೆಯಾಗುತ್ತದೆ ಎಂದು ನಂಬಲಾಗಿದೆ. 


 






12 ಜನವರಿ 2025

ನಮ್ಮ ಕೈಲಿ ಏನೂ ಇಲ್ಲ..

 ಕಾರಿಂದ ಪ್ರಜ್ಞಾಹೀನ ಮಹಿಳೆಯನ್ನು ಇಳಿಸಿ ಲಗುಬಗೆಯಿಂದ ಎಮರ್ಜೆನ್ಸಿ ಗೆ ಸೇರಿಸಿ ಐದು ನಿಮಿಷದಲ್ಲಿ  ಡಾಕ್ಟರ್ ಹೊರ ಬಂದು ಪೇಶೆಂಟ್ ಇನ್ನಿಲ್ಲ ಅಂದರು. ಗಂಡನ ದುಃಖ ನೋಡಲಾಗಲಿಲ್ಲ.ಮೂರು ಮಕ್ಕಳ ತಾಯಿ ಕುಟುಂಬ ಅಗಲಿದ್ದಾರೆ.ಆ ಮಕ್ಕಳ ನೋಡುವವರಾರು?  ಬಳ್ಳಾರಿ ಮೂಲದ ದಂಪತಿಗಳು ಬೆಂಗಳೂರಿನ ನಿಮ್ಹಾನ್ಸ್ ಗೆ ಚಿಕಿತ್ಸೆಗೆ  ಹೊರಟಿದ್ದರು.ಉಸಿರಾಟದ ತೊಂದರೆಯಿಂದ ತುಮಕೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು.

ಉಸಿರಿಲ್ಲದ ಮಹಿಳೆಯನ್ನು ಕಣ್ಣ ಮುಂದೆ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದನ್ನು ನೋಡಿ ಮನಸ್ಸು ಭಾರವೆನಿಸಿತು.

08 ಜನವರಿ 2025

ಗುಡ್ಲು ಹೋಟೆಲ್ .ಹಿರಿಯೂರು.


 ಇಂದು  ತುಮಕೂರಿನಿಂದ  ಚಿತ್ರದುರ್ಗಕ್ಕೆ ಹೋಗುವಾಗ ಹಿರಿಯೂರಿನಲ್ಲಿ ಗುಡ್ಲು ಹೋಟೆಲ್ ಅಥವಾ ಸುಂದ್ರಣ್ಣ ಹೋಟೆಲ್ ನಲ್ಲಿ ಇಡ್ಲಿ ,ವಡೆ ಪಲಾವ್ ತಿಂದೆ.  ಟಿ ಬಿ ಸರ್ಕಲ್ ನ ಚಾನಲ್ ದಡದಲ್ಲಿ ಇರುವ  ಈ ಹೋಟೆಲ್‌ ಗೆ ಬೋರ್ಡ್ ಇಲ್ಲ.ದಿನಕ್ಕೆ 5000 ಇಡ್ಲಿಗಳು  ಖರ್ಚಾಗುವ ಈ ಹೋಟೆಲ್ ಹಿರಿಯೂರು ನಗರದಲ್ಲಿ ಹಾಗೂ ನಾಡಿನಲ್ಲಿ ಮನೆಮಾತಾಗಿದೆ. ಶುಚಿ ,ರುಚಿ ಮತ್ತು ಕೈಗೆಟುಕುವ ಬೆಲೆ ಈ ಹೋಟೆಲ್ ವಿಶೇಷ. ನಾನು ಮೊದಲು ಶಿಕ್ಷಕನಾಗಿ ಕೆಲಸ ಮಾಡಿದ ಹುಚ್ಚವ್ವನಹಳ್ಳಿಯ ಇಬ್ಬರು ಈ ಹೋಟೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಬಹಳ ಆತ್ಮೀಯತೆಯಿಂದ ಮಾತನಾಡಿಸಿದರು.

ನೀವು ಈ ಹೋಟೆಲ್ ನಲ್ಲಿ ಟಿಫನ್ ಮಾಡಿದ್ದರೆ ಮಾಹಿತಿ ಹಂಚಿಕೊಳ್ಳಬಹುದು.

#sihijeeviVenkateshwara #hotel #hiriyur

03 ಜನವರಿ 2025

ಮಾಧುರಿ ಲೇಕ್..ಪ್ರವಾಸ ಕಥನ


 


#ಮಾಧುರಿಲೇಕ್..

ಅರುಣಾಚಲ ಪ್ರದೇಶದ ತವಾಂಗ್ ನಿಂದ ಬುಮ್ಲಾ ಪಾಸ್ ಕಡೆಗೆ ಪಯಣಿಸುವಾಗ ನಮಗೆ ಸಿಗುವ ಪ್ರಾಕೃತಿಕ ತಾಣವೇ ಮಾಧುರಿ ಸರೋವರ!
ಮಾಧುರಿ ದೀಕ್ಷಿತ್ ತನ್ನ ನೃತ್ಯ ಹಾಗೂ ಮಾದಕ ನೋಟದಿಂದ ರಸಿಕರ ಸೆಳೆದಂತೆ ಈ ಸರೋವರದ
ಬಣ್ಣ ಬಣ್ಣದ ನೀರು ನಯನ ಮನೋಹರ ನೋಟವು ಪ್ರವಾಸಿಗರನ್ನು  ಸೆಳೆಯುತ್ತದೆ. ಸರೋವರದ ಹಿನ್ನೆಲೆಯಲ್ಲಿ ಹಸಿರೊದ್ದ ಬೆಟ್ಟದ ಮೇಲೆ ಅಲ್ಲಲ್ಲಿ ಮಂಜಿನ ಹನಿಗಳನ್ನು ಯಾರೋ ಪೋಣಿಸಿದಂತೆ ಕಾಣುವ ಈ ಸರೋವರದ ಸೌಂದರ್ಯ ವರ್ಣಿಸಲಸದಳ. ನಾವು ಅಲ್ಲಿಗೆ ಹೋದಾಗ  ಮೈನಸ್ 6 ಡಿಗ್ರಿ ಸೆಲ್ಸಿಯಸ್ ಚಳಿಯ ವಾತಾವರಣದಲ್ಲಿ ಆ ಸುಂದರ ದೃಶ್ಯಗಳನ್ನು ನೋಡುತ್ತ ಪೋಟೋ ತೆಗೆದುಕೊಂಡು ವೀಡಿಯೋ ಮಾಡಿಕೊಂಡು ಸಂತಸಪಟ್ಟೆವು.ಹೊರ ರಾಜ್ಯದ ಆ ಸುಂದರ ತಾಣದಲ್ಲಿ ಹಲವಾರು ಅಪರಿಚಿತ ಕನ್ನಡದ ಮನಸುಗಳು ನಮ್ಮ ಜೊತೆಯಲ್ಲಿ ಸೇರಿಕೊಂಡು ಪರಿಚಿತರಾಗಿ ನಮ್ಮ ಆನಂದವನ್ನು ಇಮ್ಮಡಿಗೊಳಿಸಿದರು.
ಸಂಗೆಸ್ಟಾರ್ ತ್ಸೋ , ಹಿಂದೆ ಶೋಂಗಾ-ತ್ಸರ್ ಸರೋವರ ಎಂದು ಕರೆಯಲಾಗುತ್ತಿತ್ತು ಈಗ  ಮಾಧುರಿ ಸರೋವರ ಎಂದು ಜನಪ್ರಿಯವಾಗಿದೆ‌.  ಇದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ತವಾಂಗ್‌ನಿಂದ ಬುಮ್ ಲಾ ಪಾಸ್‌ಗೆ ಹೋಗುವ ದಾರಿಯಲ್ಲಿದೆ , ಸಮುದ್ರದಿಂದ 3,708 ಮೀಟರ್ ಮೇಲಿರುವ ಭಾರತ-ಚೀನಾ ಗಡಿಯ ಸಮೀಪದಲ್ಲಿದೆ.
ಉತ್ತರಕ್ಕೆ ತಕ್ಪೋ ಶಿರಿ ಹಿಮನದಿಯ ಕೆಳಗೆ ಹುಟ್ಟುವ ತಕ್ತ್ಸಾಂಗ್ ಚು ನದಿಯು ಈ ಪ್ರದೇಶದ ಮೂಲಕ ಹರಿಯುತ್ತದೆ. ಇದು ಪಶ್ಚಿಮಕ್ಕೆ ಹರಿದು  ನಂತರ ನೈಮ್ಜಂಗ್ ಚು ನದಿಯನ್ನು 8 ಮೈಲುಗಳು  ಕೆಳಗೆ ಸೇರುತ್ತದೆ . ತಕ್ತ್ಸಂಗ್ ಗೊಂಪಾ ಪಶ್ಚಿಮಕ್ಕೆ 1.5 ಮೈಲಿಗಳು  ಪ್ರದೇಶದಲ್ಲಿದೆ.
ಇಲ್ಲಿ ಶಾರುಖ್.ಖಾನ್   ಮಾಧುರಿ ಅಭಿನಯದ ಕೋಯ್ಲಾ ಚಿತ್ರದ "ತನ್ಹಾಯಿ ತನ್ಹಾಯಿ ತನ್ಹಾಯಿ  ದೊನೋ ಕಾ ಪಾಸ್ ಲೇ ಆಯಿ"  ಹಾಡನ್ನು ಚಿತ್ರೀಕರಣ ಮಾಡಿದ ನೆನಪಿಗಾಗಿ ಇಂದು ಮಾಧುರಿ ಲೇಕ್ ಎಂದು ಜನಪ್ರಿಯವಾಗಿದೆ. ಚಲನ ಚಿತ್ರದಲ್ಲಿ ಈ ಹಾಡು ನೋಡಿದ್ದೆ.ಅದೇ ಸ್ಥಳವನ್ನು ನೇರವಾಗಿ ನೋಡಿದಾಗ ಮತ್ತೆ ಮಾಧುರಿ ನೆನಪಾದಳು..
ಸಮಯ ಸಿಕ್ಕರೆ ಮತ್ತೊಮ್ಮೆ ಮಾಧುರಿಯನ್ನು, ಹಾಡನ್ನು ,ಲೇಕನ್ನು ನೋಡುವ ಬಯಕೆ ಇದ್ದೇ ಇದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
#sihijeeviVenkateshwara #ArunachalPradesh #tawang #madhuridixit #madhurilake #tourism

02 ಜನವರಿ 2025

ಸಂಕಲ್ಪ .ಹನಿಗವನ


 

#ಸಂಕಲ್ಪ

ನಮ್ಮ ಹೊಸ ವರ್ಷದ ಸಂಕಲ್ಪಗಳು.
ಮೊದಲ ದಿನ ಜಿಮ್ ||
ಎರಡನೇ ದಿನ ಹೋಮ್||

ಸಿಹಿಜೀವಿ ವೆಂಕಟೇಶ್ವರ
#sihijeeviVenkateshwara #newyear2025 #resolution #jokes #jokesfordays

ಭೂತಾನ್_ವಿಶೇಷ #ಭೂತಾನ್_ನಲ್ಲಿಮದುವೆ_ಇಲ್ಲ!


 


#ಭೂತಾನ್_ವಿಶೇಷ

#ಭೂತಾನ್_ನಲ್ಲಿಮದುವೆ_ಇಲ್ಲ!

ಭೂತಾನ್ ಮದುವೆಗಳು ನಮ್ಮ ದೇಶಕ್ಕಿಂತ ಭಿನ್ನ. ಅಲ್ಲಿ ಯಾವುದೇ ಯಂಗೇಜ್ ಮೆಂಟ್ ಇಲ್ಲ. ಪ್ರೀ ವೆಡ್ಡಿಂಗ್ ಶೂಟ್ ಇಲ್ಲ. ರಿಸೆಪ್ಷನ್ ಅಂತೂ ಇಲ್ಲವೇ ಇಲ್ಲ.ಹಾಗಾದರೆ ಮದುವೆ ಹೇಗೆ? ಸಿಂಪಲ್ ಗಂಡು ಹೆಣ್ಣು ಮೊದಲು ಪ್ರೀತಿಯಲ್ಲಿ ಬಿದ್ದು ನಾಲ್ಕಾರು ತಿಂಗಳು ಮರ ಸುತ್ತಿ ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ನಂತರ ಮದುವೆಯಾಗಲು ಸಿದ್ದವಾಗಿ  ಮನೆಯವರ ಅನುಮತಿಯೊಂದಿಗೆ ಜೊತೆಯಲ್ಲಿ ವಾಸಿಸುತ್ತಾರೆ ಯಾವುದೇ ಸಂಪ್ರದಾಯದ ಸಮಾರಂಭಗಳು ನಡೆಯುವುದಿಲ್ಲ. ಬೀಗರೂಟವೂ ಇಲ್ಲ.
ಅದಕ್ಕೆ ಯಾವುದೇ  ದಾಖಲೆ, ಮ್ಯಾರೇಜ್ ರಿಜಿಸ್ಟ್ರೆಶನ್ ಅಗತ್ಯವಿಲ್ಲ. ಮಕ್ಕಳ ಮದುವೆಗೆ ಅದರಲ್ಲೂ ಹೆಣ್ಣು ಹೆತ್ತವರು ಲಕ್ಷಾಂತರ ಸಾಲ ಮಾಡಿ ಮಾಡುವ ಮದುವೆಗಳು ಎಷ್ಟೋ ತಂದೆ ತಾಯಿಗಳ ನಿದ್ರೆಯಿಲ್ಲದ ರಾತ್ರಿ ಕಳೆಯುವಂತೆ ಮಾಡುವ ನಮ್ಮ ಮದುವೆಗಳನ್ನು ನೋಡಿದಾಗ ಭೂತಾನ್ ಮದುವೆಗಳು ಗಮನ ಸೆಳೆಯುತ್ತವೆ ನಮ್ಮ ಬಸ್ ಡ್ರೈವರ್ "ನಮ್ಗೆ" ಗೆ ಮದುವೆಯಾಗಿ ಮೂರು ಮಕ್ಕಳಿದ್ದರೆ ನಮ್ಮ ಗೈಡ್ "ತೆಂದಿನ್" ಈಗ ಲವ್ ಮಾಡುತ್ತಿದ್ದಾನಂತೆ ನಮ್ಮನ್ನು ಮದುವೆಗೆ ಆಹ್ವಾನಿಸುವೆ  ಎಂದಿದ್ದಾನೆ. ನಾನು ಅವನ ಮದುವೆಗೆ ಮತ್ತೊಮ್ಮೆ ಭೂತಾನ್ ಗೆ ಹೋಗಬೇಕು. ಇಲ್ಲಿ ಮತ್ತೊಂದು ವಿಷಯ ನಿಮಗೆ ಹೇಳಲೇ ಬೇಕು   ಭೂತಾನ್ ನಲ್ಲಿ ಮದುವೆ ಗಂಡುಗಳಿಗೆ ಬೇಡಿಕೆ ಹೆಚ್ಚು. ಕಾರಣ ಅಲ್ಲಿ ಹೆಚ್ಚು ಗಂಡು ಮಕ್ಕಳು ಬೌದ್ಧ ಭಿಕ್ಷುಗಳಾಗಿ ಅವಿವಾಹಿತರಾಗಿ ಉಳಿಯುತ್ತಾರೆ.ಅದರಿಂದಾಗಿ ಮದುವೆಗೆ ಸಿದ್ದವಾದ ಯುವತಿಯರು ಮೂರು ಜನ ಇದ್ದರೆ ಯುವಕರು ಒಬ್ಬರು ಮಾತ್ರ! ಅಂದರೆ ಗಂಡಿಗೆ ಬಹಳ ಡಿಮಾಂಡ್.

ಸಿಹಿಜೀವಿ ವೆಂಕಟೇಶ್ವರ
#sihijeeviVenkateshwara
#Bhutan #bhutantravel #bhutanese #marriage