02 June 2021

ಪತ್ಯಾಹಾರ .ಕಾದಂಬರಿ ವಿಮರ್ಶೆ


 


ಪ್ರತ್ಯಾಹಾರ

 ಕಾದಂಬರಿಯ ವಿಮರ್ಶೆ


ಈಗಾಗಲೇ ಭಾರತದ ಸಾರಸ್ವತ ಲೋಕಕ್ಕೆ ಎಂಟು ಕಾದಂಬರಿ ಮತ್ತು ಕವನ ಸಂಕಲನಗಳನ್ನು ನೀಡಿರುವ , ಕವಿ, ಕಾದಂಬರಿಕಾರರಾದ ಶ್ರೀ ವಿದ್ಯಾಧರ ದುರ್ಗೇಕರ್ ರವರು, ನನಗೆ ತಿಳಿದ ಮಟ್ಟಿಗೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಕಾದಂಬರಿ ಬರೆವ ಏಕೈಕ ಕಾದಂಬರಿ ಕಾರರು ಎನಿಸುತ್ತದೆ.


ಶ್ರೀಯುತರ   ಮೊದಲ ಕಾದಂಬರಿ "ಜೀವಾತ್ಮಗಳ ವಿಕ್ರಯ" ಓದಿದ್ದ ನನಗೆ ಅವರ ಮುಂದಿನ ಕಾದಂಬರಿಯ ಪ್ರಕಟಣೆಯನ್ನು ಉತ್ಸುಕತೆಯಿಂದ ನಿರೀಕ್ಷೆ ಮಾಡಿದ್ದೆ ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ, ಅವರ "ಪ್ರತ್ಯಾಹಾರ" ಕಾದಂಬರಿ ಪ್ರಕಟವಾದ ಸುದ್ದಿ ತಿಳಿದು ಅಮೆಜಾನ್ ನಲ್ಲಿ ಖರೀದಿ ಮಾಡಿ ಓದಿದೆ.


ಮೊದಲ ಕಾದಂಬರಿಯಲ್ಲಿ ಸಾಮಾಜಿಕ ಸಂದೇಶದ ಜೊತೆ ಒಂದು ಪ್ರೇಮ ಕಥೆ ಹೇಳಿದ್ದ ಕಾದಂಬರಿಕಾರರು ಈ ಬಾರಿ ಔಟ್ ಅಂಡ್ ಔಟ್ ಪ್ರೇಮ ಕಥೆ ನೀಡಿ ಓದುಗರ ಮನ ಗೆದ್ದಿದ್ದಾರೆ ,ಅದರಲ್ಲೂ ಯುವಜನಾಂಗ ಈ ಪುಸ್ತಕವನ್ನು ಬಹಳ ಇಷ್ಟ ಪಡುವರು.


ಕೆರೆಯಲ್ಲಿ ಮುಳುಗುತ್ತಿರುವ  ಸಾಂಡಿ, ಅಲಿಯಾಸ್ ಸಂದೇಶ್ ಮತ್ತು ಕಾವ್ಯ ರನ್ನು ರಕ್ಷಣಾ ಪಡೆಗಳು ರಕ್ಷಣೆ ಮಾಡುವ ಮನೋಹರ ವರ್ಣನೆಯಿಂದ ಆರಂಭವಾಗುವ ಕಾದಂಬರಿಯ ಮೊದಲ ಪುಟವು ಓದುಗರ ಸೆಳೆದು ಒಂದೇ  ಗುಕ್ಕಿನಲ್ಲಿ ಓದುವಂತೆ ಮಾಡುತ್ತದೆ.


ಅಲ್ಲಲ್ಲಿ ಬರುವ ಅನಿರೀಕ್ಷಿತ ತಿರುವುಗಳು ನಾಯಕ ನಾಯಕಿಯರ ಮನದ ತುಮುಲಗಳನ್ನು ಬಹಳ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಕಾದಂಬರಿಕಾರರು,


 ಇಂಜಿನಿಯರಿಂಗ್ ಓದುವ ಸ್ಯಾಂಡಿಗೆ ಕಾವ್ಯ ಳ ಮೇಲೆ ಪ್ರೀತಿ, ಡಾಕ್ಟರ್ ಓದುವ ರಶ್ಮಿ ಗೆ ಬಾಲ್ಯದಿಂದಲೂ ಸ್ಯಾಂಡಿ ಮೇಲೆ ಪ್ರೀತಿ, ಈ 

 ಏಳು ಬೀಳಿನ ಪ್ರೇಮ ಕಥೆಯಲ್ಲಿ ಸಾಂಡಿಗೆ ಕಾವ್ಯ ಸಿಗುವಳೆ ?  ಅಥವಾ ರಶ್ಮಿಗೆ ಸ್ಯಾಂಡಿ ಸಿಗುವನೆ  ಎಂಬುದನ್ನು ಕಾದಂಬರಿಯ ಓದಿಯೇ ಸವಿಯಬೇಕು .


ಕಾದಂಬರಿಯಲ್ಲಿ ಅಲ್ಲಲ್ಲಿ ಬರುವ ಕೆಲ ಸಾಲುಗಳು ನಮ್ಮನ್ನು ಚಿಂತನೆಗೆ ಹಚ್ಚುವ ಗುಣ ಹೊಂದಿವೆ ,ಅದು ಒತ್ತಡ ನಿವಾರಿಸಲು, ಯೋಗ ಧ್ಯಾನ, ಪ್ರಾಣಾಯಾಮ ಮಾಡಬೇಕು ಎಂಬ ಸಾಲುಗಳಿರಬಹುದು, 

ಶಿಕ್ಷಕರು ಮಕ್ಕಳಿಗೆ ಬೋಧಿಸುವಾಗ ಮೊದಲು ಅವರು ವಿದ್ಯಾರ್ಥಿಗಳಂತೆ ಸದಾ ಕಲಿಯುತ್ತಿರಬೇಕು, ಎಂಬ ಮಾತುಗಳಿರಬಹು. 


ಕಾದಂಬರಿಯಲ್ಲಿ ನಮ್ಮನ್ನು ಇಟಲಿಗೆ ಕರೆದುಕೊಂಡು ಹೋಗುವ ಕಾದಂಬರಿಕಾರರು ಅಲ್ಲಿನ ನಗರಗಳ ಸೌಂದರ್ಯ, ಕಲೆ ವಾಸ್ತುಶಿಲ್ಪ, ಮ್ಯೂಸಿಯಂ ಗಳು, ವಿಶ್ವ ವಿದ್ಯಾಲಯ ಗಳ ಬಗ್ಗೆ ಕಣ್ಣಿಗೆ ಕಟ್ಟುವಂತೆ ‌ಚಿತ್ರಣ ನೀಡಿರುವರು.


ಕಾದಂಬರಿಯು ಮೊದಲು ಆಂಗ್ಲದಲ್ಲಿ ನಂತರ ಕನ್ನಡದಲ್ಲಿ ಬರೆದಿರುವುದರಿಂದ ಕೆಲವೆಡೆ ಕನ್ನಡ ಸಾಲುಗಳ ನಿರಂತರತೆಯ ಕೊರತೆಯಾದಂತೆ ಕಂಡು ‌ಬಂತು ,ಉಳಿದಂತೆ ಕಾದಂಬರಿಯು ಓದಿಸಿಕೊಂಡು  ಹೋಗುತ್ತದೆ ,  ಕಾದಂಬರಿಯ ಕೊನೆಯ ಪ್ಯಾರಾವನ್ನು  ಓದುವಾಗ ಅನಿರೀಕ್ಷಿತವಾದ ಮುಕ್ತಾಯದೊಂದಿಗೆ  ಒಂದು ಉತ್ಕೃಷ್ಟ ಕನ್ನಡ ಕಾದಂಬರಿ ಓದಿದ ತೃಪ್ತಿ ನಮ್ಮದಾಗಲಿದೆ ನೀವೂ ಒಮ್ಮೆ ಓದಿ ...


ಕಾದಂಬರಿ: ಪ್ರತ್ಯಾಹಾರ


ಕಾದಂಬರಿ ಕಾರರು: ವಿದ್ಯಾಧರ ದುರ್ಗೇಕರ್


ಪ್ರಕಾಶನ : H S R A ಪ್ರಕಾಶನ ಬೆಂಗಳೂರು


ಬೆಲೆ: 200₹ 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


No comments: