23 ಜುಲೈ 2023

ಯಾವ್ ಕಾಲೇಜು?....ನ್ಯಾನೋ ಕಥೆ

 



ಯಾವ್ ಕಾಲೇಜ್?


"ನಿನ್ನ ಮಗಳಿಗೆ ಇಲ್ಲೇ ಇರುವ ಲೋಕಲ್ ಕಾಲೇಜ್ ಬೆಟರ್ " ಆತ್ಮೀಯ ಸ್ನೇಹಿತ ಸಲಹೆ ನೀಡಿದ."ನೀಟ್, ಜೆ ಈ ಈ, ಸಿ ಈಟಿ ಈ ಟೌನ್ ನಲ್ಲಿ ಕೋಚಿಂಗ್ ಸರಿ ಇಲ್ಲ ಸುಮ್ನೇ ಬೆಂಗಳೂರಿಗೆ ಹಾಕು" ಹತ್ತಿರದ  ಸಂಬಂಧಿ ಸತೀಶ ತಾಕೀತು ಮಾಡಿದ. ಸಹೋದ್ಯೋಗಿ ಸುಮ ಸಲಹೆಯೇ ಬೇರೆ" ಸಾರ್ ನನಗೆ ಗೊತ್ತಿರೋ ಒಂದ್ಕಾಲೇಜು ಮಂಗ್ಳೂರಾಗೈತೆ ಸುಮ್ನೆ ಅಲ್ಗಾಕಿ ನಿಮ್ ಮಗ್ಳು ಗ್ಯಾರಂಟಿ ಡಾಕ್ಟ್ರು ".

ಮಗಳ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೊಂ ಭತ್ತೆಂಟು ಪರ್ಸೆಂಟೇಜ್ ಪಡೆದ ಖುಷಿಯಲ್ಲಿದ್ದ ರವಿಕುಮಾರ್ ಗೊಂದಲದ ಗೂಡಿನಲ್ಲಿ ಬಿದ್ದು ಚಿಂತಿಸುತ್ತಾ ಮನೆಗೆ ಬಂದು ಕಾಫಿ ಹೀರುವಾಗ .ಮಗಳು ಅಪ್ಪಾ ನಾನ್ ಯಾವ್ ಕಾಲೇಜ್ ಸೇರಲಿ ಎಂದಾಗ ಅಪ್ಪ ಮಗಳ ಮುಖವನ್ನೇ ನೋಡುತ್ತಿದ್ದ ಉತ್ತರ ಬರಲಿಲ್ಲ....


ಸಿಹಿಜೀವಿ ವೆಂಕಟೇಶ್ವರ

ತುಮಕೂರು

21 ಜುಲೈ 2023

ನಮ್ಮ ಮೆದುಳು ನಮ್ಮ ಆರೋಗ್ಯ...


 


ನಮ್ಮ ಮೆದಳು ನಮ್ಮ ಆರೋಗ್ಯ.

ಮಾನವ ಇತರೆ ಪ್ರಾಣಿಗಳಿಗಿಂತ ವಿಭಿನ್ನವಾಗಿರುವುದಕ್ಕೆ  ಅವನ ಮೆದುಳು ಕೂಡ ಒಂದು ಕಾರಣ
ಪ್ರಪಂಚದಾದ್ಯಂತ  ಪ್ರತಿ ವರ್ಷ ಜುಲೈ 22 ರಂದು ವಿಶ್ವ ಮೆದುಳಿನ ದಿನವನ್ನು ಆಚರಿಸಲಾಗುತ್ತದೆ. ಇದು ಪ್ರಪಂಚದ ಅತ್ಯಂತ ಪ್ರಮುಖ ವಾರ್ಷಿಕ ಆಚರಣೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ನಮ್ಮ ಆಧುನಿಕ ಯುಗದಲ್ಲಿ ಹೆಚ್ಚುತ್ತಿರುವ ಮಹತ್ವದ ಆರೋಗ್ಯ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. 
ಒಂದೂವರೆ ಕೇಜಿ ತೂಕದ ಮೆದುಳೇ ಒಂದು ಸಂಕೀರ್ಣವಾದ ಮತ್ತು ಅಚ್ಚರಿದಾಯಕ ಕೆಲಸ ಮಾಡುವ ಅದ್ಬುತ ಯಂತ್ರ ಎಂದರೆ ತಪ್ಪಾಗಲಾರದು.10000ಕೋಟಿ ನರಕೋಶಗಳನ್ನು ಹೊಂದಿರುವ ಇದು ನಮ್ಮ ಮಾನಸಿಕ ಆರೋಗ್ಯದ ಕೀಲಿ ಕೈ ಎಂದರೆ ತಪ್ಪಾಗಲಾರದು.
9 ನೇ ವಾರ್ಷಿಕ ವಿಶ್ವ ಮೆದುಳಿನ ದಿನವನ್ನು ವಿಶ್ವದಾದ್ಯಂತ ಆಚರಿಸುವ ಈ ಸಂದರ್ಭದಲ್ಲಿ  ವರ್ಲ್ಡ್ ಫೆಡರೇಶನ್ ಆಫ್ ನ್ಯೂರಾಲಜಿ ಪ್ರಮುಖವಾದ ಪಾತ್ರ ವಹಿಸುತ್ತಾ  ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ.

ಈ ವರ್ಷದ ಮೆದುಳು ದಿನದ  ಥೀಮ್  "ಮೆದುಳಿನ ಆರೋಗ್ಯ ಮತ್ತು ಅಂಗವೈಕಲ್ಯ, ಯಾರನ್ನೂ ಹಿಂದೆ ಬಿಡಬೇಡಿ"

 ಇಂದಿನ ಧಾವಂತದ ಗಡಿಬಿಡಿಯ ದಿನಗಳಲ್ಲಿ ಅಬಾಲರಾದಿಯಾಗಿ ವೃದ್ದರ ವರೆಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಒತ್ತಡ ಅನುಭವಿತ್ತಾ ಅದು ಮೆದುಳಿನ ಮೇಲೆ ಪ್ರಭಾವವನ್ನು ಮೀರಿ ನಾವು ಕೇಳಿರದ ಹೊಸ ಹೊಸ ಖಾಯಿಲೆಯಿಂದ ಬಳಲುವಂತೆ ಮಾಡುತ್ತಿದೆ.
ಈ ಮೆದುಳು ದಿನದ ಅಂಗವಾಗಿ ನಾವು ನಮ್ಮ ಜೀವನಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವ ಸಂಕಲ್ಪ ಮಾಡಬೇಕಾಗಿದೆ.
ಅಮೇರಿಕನ್ ಬ್ರೈನ್ ಫೌಂಡೇಶನ್ ಈ ದಿನದ ನೆನಪಿನಲ್ಲಿ  ನಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕೆಲ ಸಲಹೆಗಳನ್ನು ನೀಡಿದೆ.ಅವುಗಳಲ್ಲಿ ಕೆಲವನ್ನಾದರೂ ಪಾಲಿಸೋಣ.

ಪಾರ್ಕಿನ್ಸನ್ ಮತ್ತು ಆಲ್ ಜಮೈನರ್ ನಂತಹ   ಮೆದುಳಿಗೆ ಸಂಬಂಧಪಟ್ಟ ನ್ಯೂರೋ ಡಿಜೆನೆರೇಟಿವ್ ಕಾಯಿಲೆಗಳಿಗೆ ಸರಿಯಾಗಿ ನಿದ್ರೆ ಮಾಡದಿರುವುದು ಪ್ರಮುಖವಾದ ಕಾರಣ. 41% ಜನರು ಸರಿಯಾದ ನಿದ್ರೆ ಮಾಡದೇ ಈ ರೋಗಕ್ಕೆ ತುತ್ತಾಗುತ್ತಾರೆ ಎಂದು ಸಂಶೋಧನೆಗಳು ದೃಢಪಡಿಸಿವೆ.  ಆದ್ದರಿಂದ ವಯಸ್ಕರು ದಿನಕ್ಕೆ ಕನಿಷ್ಟಪಕ್ ಏಳರಿಂದ ಎಂಟು ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಮಾಡಿದರೆ ಅಲ್ ಜಮೈರ್ ರೋಗಕ್ಕೆ ಕಾರಣವಾದ ಪ್ರೋಟೀನ್ ಅಮಿಲಾಯ್ಡ್ ಪ್ಲೇಕ್ಗಳ ವಿಷಕಾರಿ ಸಂಗ್ರಹವನ್ನು ತಡೆಯಲು ನಮ್ಮ ಮಿದುಳುಗಳು ಸಾಧ್ಯವಾಗುತ್ತದೆ ಎಂದು ಸಂಶೋಧನೆಗಳು ತೋರಿಸುತ್ತವೆ.ಆದ್ದರಿಂದ ಇಂದೇ ನಾವೆಲ್ಲರೂ ಗುಣಮಟ್ಟದ ನಿದ್ರೆ ಮಾಡಲು ಪಣ ತೊಡೋಣ. 

ಮೆದುಳಿನ ಸಮಸ್ಯೆ ಬರಲು ಕಾರಣಗಳಲ್ಲಿ ತಲೆಗೆ ಬಲವಾದ ಪೆಟ್ಟು ಬೀಳುವುದು ಒಂದು ಕಾರಣ
ತಲೆ ಗಾಯಗಳು ಆಗದಂತೆ   ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ನಮ್ಮ ಮೆದುಳಿನ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಮಿದುಳಿನ ಗಾಯವನ್ನು ತಡೆಗಟ್ಟಲು ಸೀಟ್ ಬೆಲ್ಟ್ ಅಥವಾ ಹೆಲ್ಮೆಟ್ ಧರಿಸುವಂತಹ ಕ್ರಮಗಳು ಮುಖ್ಯ. ಕ್ರೀಡೆಗಳನ್ನು ಆಡುವಾಗ, ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸಿಕೊಂಡು ಆಟವಾಡೋಣ.

ನಿಯಮಿತ ವ್ಯಾಯಾಮವು   ಮೆದುಳಿನ ಆರೋಗ್ಯವನ್ನು ಉತ್ತೇಜಿಸಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಏರೋಬಿಕ್ಸ್ ನಂತಹ  ವ್ಯಾಯಾಮಗಳು  ಮೆದುಳಿನಲ್ಲಿ ಪ್ರಯೋಜನಕಾರಿ ಜೀನ್ಗಳನ್ನು ಸಕ್ರಿಯಗೊಳಿಸಬಹುದು ಮತ್ತು ಸ್ಮರಣೆಗೆ ಸಹಾಯ ಮಾಡುತ್ತದೆ.   ವ್ಯಾಯಾಮದ ಸಮಯದಲ್ಲಿ ಮೆದುಳಿಗೆ ಹೆಚ್ಚಿದ ರಕ್ತದ ಹರಿವಿನೊಂದಿಗೆ ನಮ್ಮ ಮೆದುಳಿನ ಆರೋಗ್ಯ ವೃದ್ಧಿಸಲು ಸಹಕಾರಿ.
ಆದ್ದರಿಂದ. ಈ ಮೆದುಳು ದಿನದಂದು ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ಮಾಡುವ ಸಂಕಲ್ಪ ಮಾಡೋಣ.
ಇದರ ಜೊತೆಯಲ್ಲಿ ನಮ್ಮ ಮನಸ್ಸನ್ನು ಸಂತೋಷವಾಗಿಟ್ಟುಕೊಳ್ಳುವುದು ಬಹಳ ಮುಖ್ಯ ಹಾಗೂ ನಾವು ಮಾನಸಿಕವಾಗಿ ಸಕ್ರಿಯವಾಗಿರುವುದು ಮುಖ್ಯ. ಹವ್ಯಾಸಗಳು ಮತ್ತು ವೈಯಕ್ತಿಕ ಆಸಕ್ತಿಗಳು, ಸಾಮಾಜಿಕ ತೊಡಗಿಸಿಕೊಳ್ಳುವಿಕೆ ಮತ್ತು ಹೊಸ ವಿಷಯಗಳನ್ನು ಕಲಿಯುವುದು ಇವೆಲ್ಲವೂ ಮೆದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. 

ನಮ್ಮ ಮಾನಸಿಕ ಆರೋಗ್ಯ ಮತ್ತು ಮೆದುಳಿನ ಆರೋಗ್ಯ ಪರಸ್ಪರ ಪೂರಕ ಸಂಬಂಧ ಹೊಂದಿದೆ. ವಾಸ್ತವವಾಗಿ, ಖಿನ್ನತೆ ಮತ್ತು ಒತ್ತಡವು ಮೆಮೊರಿ ನಷ್ಟಕ್ಕೆ ಕಾರಣವಾಗಬಹುದು. ನಿಯಮಿತ ಸಾಮಾಜಿಕ ಸಂವಹನವು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಒತ್ತಡವನ್ನು ನಿಭಾಯಿಸುವ ಆರೋಗ್ಯಕರ ವಿಧಾನಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಆದ್ದರಿಂದ ಸಾಧ್ಯವಾದಾಗಲೆಲ್ಲಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಸಮಯ ಮಾಡಿಕೊಳ್ಳೋಣ.
ಖ್ಯಾತ ಮನೋವೈದ್ಯರಾದ ಸಿ ಆರ್ ಚಂದ್ರಶೇಖರ್ ರವರು ಮೆದುಳು ದಿನದ ಅಂಗವಾಗಿ ನಮಗೆ ಕೆಲ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ."ಮೆದುಳಿಗೆ ಹಾನಿಯಾಗುವ ಮದ್ಯಪಾನ ತ್ಯಜಿಸಿ, ಜಂಕ್ ಪುಡ್ ವರ್ಜಿಸಿ, ಓದು ಚರ್ಚೆ, ಸಂಗೀತದೊಂದಿಗೆ ಕಾಲ ಕಳೆಯಿರಿ ನಿಮ್ಮ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ"
ಮೆದುಳು ದಿನದಂದು ನಮ್ಮ  ದೈನಂದಿನ ದಿನಚರಿಯಲ್ಲಿ ಕೆಲ ಸಕಾರಾತ್ಮಕ ಬದಲಾವಣೆಗಳನ್ನು ಅಳವಡಿಸಿಕೊಂಡು ಕ್ ನಮ್ಮ ಮೆದುಳನ್ನು ಆರೋಗ್ಯಕರವಾಗಿ ಮತ್ತು ಕ್ರಿಯಾಶೀಲವಾಗಿಟ್ಟುಕೊಳ್ಳೋಣ.ಮತ್ತು ಮಾನಸಿಕ ಅರೋಗ್ಯ ಪಡೆಯೋಣ.

ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529

ತಿರುಮಲಾದ ಶಿಲಾತೋರಣ


 


ಶಿಲಾ ತೋರಣ

ಪ್ರತಿವರ್ಷ ಜುಲೈ ಹದಿಮೂರನ್ನು  ಅಂತರರಾಷ್ಟ್ರೀಯ ಶಿಲಾ ದಿನ ಎಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕುಟುಂಬ ಸಮೇತ ತಿರುಮಲೆ ಗೆ ಹೋದಾಗ ನೋಡಿದ ಶಿಲಾತೋರಣ ನೆನಪಾಯಿತು.ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ನಂತರ ತಿರುಮಲೆಯ ಇತರ ಸ್ಥಳಗಳನ್ನು ನೋಡಲು ಹೊರಟಾಗ ಮೊದಲು ಸಿಕ್ಕಿದ್ದೇ ಈ ಶಿಲಾತೋರಣ!

ತಿರುಮಲ ಬೆಟ್ಟಗಳಲ್ಲಿನ ನೈಸರ್ಗಿಕ ಕಮಾನು ಅಥವಾ ಶಿಲಾತೋರಣ ಒಂದು ಅಧಿಸೂಚಿತ  ರಾಷ್ಟ್ರೀಯ ಭೂ-ಪರಂಪರೆ ಸ್ಮಾರಕವಾಗಿದೆ. ಇದು  ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯದ ಉತ್ತರಕ್ಕೆ 2ಕಿಲೊಮೀಟರ್ ದೂರದಲ್ಲಿದೆ. ಸ್ಥಳೀಯ ತೆಲುಗು  ಭಾಷೆಯಲ್ಲಿ ಕಮಾನುಗಳನ್ನು ಸಿಲಾ ತೋರಣಂ ಎಂದೂ ಕರೆಯುತ್ತಾರೆ ತೆಲುಗು ಭಾಷೆಯಲ್ಲಿ ಸಿಲಾ ಎಂದರೆ 'ಬಂಡೆ' ಮತ್ತು ತೋರಣಂ ಎಂದರೆ ಹೊಸ್ತಿಲ ಮೇಲೆ ಕಟ್ಟಲಾದ ಹಾರ.  ಈ ಅಪರೂಪದ ಭೂವೈಜ್ಞಾನಿಕ ಕಮಾನು 1,500 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ಈ ಭವ್ಯವಾದ, ಸ್ವಾಭಾವಿಕವಾಗಿ ರೂಪುಗೊಂಡ ಕಮಾನು ಏಷ್ಯಾದಲ್ಲಿ ಕಂಡು ಬರುವುದು ಇದೊಂದು ಮಾತ್ರ.    ಮತ್ತು ಪ್ರಪಂಚದಲ್ಲಿ ಈ ರೀತಿಯ ಎರಡು  ರಚನೆಗಳಿವೆ   ಅಮೆರಿಕಾ ದ  ಉತಾಹ್ನ ರೈನ್ಬೋ ಆರ್ಚ್ ಮತ್ತು ಯುನೈಟೆಡ್ ಕಿಂಗ್ಡಮ್ ನಲ್ಲಿ ಕಟ್ ಥ್ರೂ ಆರ್ಚ್ ಇವೆ. 

ಒಂದು ನಂಬಿಕೆಯ ಪ್ರಕಾರ ವೆಂಕಟೇಶ್ವರ ಸ್ವಾಮಿಯು ಭುವಿಗೆ ಬಂದಾಗ ಮೊದಲು ಗಿರಿಯ ಮೇಲೆ ಒಂದು ಪಾದ ಇಟ್ಟ ಜಾಗವು ಇಂದಿನ
ಶ್ರೀವಾರಿ ಪದಾಲು ಅಥವಾ ಸ್ವಾಮೀ ಪಾದ  ಅಲ್ಲಿರುವ  ಪಾದಮುದ್ರೆಗಳನ್ನು ಭಕ್ತರು ಶ್ರಧ್ದಾ ಭಕ್ತಿಯಿಂದ ಪೂಜಿಸುತ್ತಾರೆ. ಇದು ತಿರುಮಲ ಬೆಟ್ಟಗಳ ಅತ್ಯುನ್ನತ ಸ್ಥಳವಾಗಿದೆ, ಕಮಾನಿನ ಸ್ಥಳವಾದ ಶಿಲಾತೋರಣದ ಬಳಿ ಸ್ವಾಮಿಯು ಎರಡನೇ ಹೆಜ್ಜೆ ಇಟ್ಟರು.   ನಂತರ ಮೂರನೇ ಹೆಜ್ಜೆಯನ್ನು  ತಿರುಮಲದಲ್ಲಿರುವ ದೇವಾಲಯದಲ್ಲಿ ಈಗ ಅವರ ವಿಗ್ರಹವನ್ನು ಪೂಜಿಸುವ ಸ್ಥಳದಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತದೆ.

1980 ರ ದಶಕದಲ್ಲಿ,   ತಿರುಮಲ ಬೆಟ್ಟಗಳಲ್ಲಿ ಭೂವೈಜ್ಞಾನಿಕ  ಉತ್ಖನನದ ಸಮಯದಲ್ಲಿ ಭೂವಿಜ್ಞಾನಿಗಳು  ಈ ಅಪರೂಪದ ಬಂಡೆಯ ಕಮಾನು ರಚನೆಯನ್ನು ಗಮನಿಸಿದರು. ಇದು ಸಂಪರ್ಕಿಸುವ ತೆಳುವಾದ ಕೊಂಡಿಯೊಂದಿಗೆ ಎರಡು ಭಿನ್ನವಾದ ಬಂಡೆಗಳನ್ನು ಹೊಂದಿದೆ. ಕಲ್ಲಿನ ಕಮಾನುಗಳ ಅಂದಾಜು ಭೂವೈಜ್ಞಾನಿಕ ವಯಸ್ಸು 2.5 ಮಿಲಿಯನ್ ವರ್ಷಗಳು. ಕಮಾನು ರಚನೆಯು ತೀವ್ರವಾದ ಹವಾಮಾನ ಮತ್ತು ಪ್ರಕೃತಿಯ ಟಾರ್ಕ್ ಅನ್ನು ತಡೆದುಕೊಳ್ಳುವ ಸ್ಟ್ರೀಮ್ ಕ್ರಿಯೆಯ ಸವೆತಕ್ಕೆ ಕಾರಣವಾಗಿದೆ. ಇದು ಅಪರೂಪದ ಭೂವೈಜ್ಞಾನಿಕ ದೋಷವಾಗಿದ್ದು, ಇದನ್ನು ತಾಂತ್ರಿಕವಾಗಿ ಭೂವೈಜ್ಞಾನಿಕ ಭಾಷಾವೈಶಿಷ್ಟ್ಯದಲ್ಲಿ ' ಎಪಾರ್ಚಿಯನ್ ಅಸಂಗತತೆ ' ಎಂದು ಕರೆಯಲಾಗುತ್ತದೆ.

ಈ ಶಿಲಾತೋರಣ ನೋಡಲು ಸ್ಥಳೀಯವಾಗಿ ಲಭ್ಯವಿರುವ ಟ್ಯಾಕ್ಸಿ ಜೀಪ್ ಲಭ್ಯವಿವೆ. ತಮ್ಮ ಖಾಸಗಿ ವಾಹನಗಳಲ್ಲೂ ಹೋಗಬಹುದು ಆದರೆ ಚಾಲಕರು ಘಟ್ಟದ ಪ್ರದೇಶದಲ್ಲಿ ವಾಹನ ಚಲಾಯಿಸುವ ಅನುಭವ ಇದ್ದರೆ ಉತ್ತಮ.
ಬೆಳಿಗ್ಗೆ ಆರರಿಂದ   ಎಂಟು ಗಂಟೆಗಳ ಸಮಯದಲ್ಲಿ ಈ ಪ್ರದೇಶದ ವೀಕ್ಷಿಸಲು ಸೂಕ್ತ  ಅಗಾಗ್ಗೆ ಬಂದು ಮಾಯವಾಗುವ ಮಂಜು, ದಟ್ಟವಾದ ಕಾಡಿನ ಹಿನ್ನೆಲೆಯಲ್ಲಿ ಶಿಲಾತೋರಣ ನೋಡುವುದೇ ಒಂದು ಸುಂದರ ಅನುಭವ. ಶಿಲಾತೋರಣದ ಮುಂಭಾಗದಲ್ಲಿ   ಉತ್ತಮವಾಗಿ ನಿರ್ವಹಿಸಲ್ಪಟ್ಟ ಉದ್ಯಾನವಿದೆ. ಸೂರ್ಯಾಸ್ತವು ಭೇಟಿ ನೀಡಲು ಉತ್ತಮ ಸಮಯವಾಗಿದೆ, ಏಕೆಂದರೆ ಕಮಾನು ಸೂರ್ಯಾಸ್ತದ  ಬೆಳಕಿನಲ್ಲಿ ಇನ್ನಷ್ಟು ಆಕರ್ಷಕವಾಗಿ ಮತ್ತು ನಿಗೂಢವಾಗಿ ಕಾಣುತ್ತದೆ.
ನೀವು ಮುಂದಿನ ಬಾರಿ ತಿರುಮಲೆಗೆ ಭೇಟಿ ನೀಡಿದಾಗ ವೆಂಕಟೇಶ್ವರ ಸ್ವಾಮಿಯ ದರ್ಶನದ ಬಳಿಕ ಈ ಪ್ರಾಕೃತಿಕ ಪರಂಪರೆಯನ್ನು ನೋಡಿ ಕಣ್ತುಂಬಿಕೊಳ್ಳಲು ಮರೆಯದಿರಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.


14 ಜುಲೈ 2023

ಟೊಮ್ಯಾಟೋ ಪುರಾಣ...


 

ಟೊಮ್ಯಾಟೊ ಪುರಾಣ...

ಟೊಮ್ಯಾಟೊ...ಟೊಮ್ಯಾಟೊ... ದೇಶದಾದ್ಯಂತ ಜನರ ನಿದ್ದೆಗೆಡಿಸಿದ ಪದ! ಅದರ ದರ ಕೇಳಿ ಜನರು ಕನಸಲ್ಲೂ ಬೆಚ್ಚಿಬೀಳುತ್ತಿದ್ದಾರೆ.

ಹೆಂಡತಿ ಬಲವಂತ ಮಾಡಿದಾಗ
ಅವನಂದ ಬೇಡ ಟೊಮ್ಯಾಟೊ
ಜಾಸ್ತಿಯಾಗಿದೆ  ಅದರ ದರ |
ಆಯ್ತು ತರಬೇಡಿ ಬಿಡಿ
ನಿಮಗೆ ಸಿಗುವುದು ಡೌಟು
ನನ್ನ ಅಧರ ||

ಕೆಲವೆಡೆ ಟೊಮ್ಯಾಟೊ ಅಂಗಡಿಗಳಲ್ಲಿ ಸಿಸಿ ಟಿ ವಿ ಅಳವಡಿಸಿದ್ದರೆ ಇನ್ನೂ ಕೆಲವೆಡೆ ಟೊಮ್ಯಾಟೊ ಬೆಳೆದ ರೈತರು ಕಳ್ಳರ ಕಾಟದಿಂದ  ಹೈರಾಣಗಿದ್ದಾರೆ . ರಾತ್ರಿಯಿಡಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ತಮ್ಮ ಬೆಳೆ ಕಾಯುವ ದೃಶ್ಯಗಳು ಸಾಮಾನ್ಯವಾಗಿವೆ.
ಈ ಟೊಮ್ಯಾಟೊ ಪ್ರವರ ಇಲ್ಲಿಗೇ ನಿಂತಿಲ್ಲ ಇದು ಕೆಲ ಸಂಸಾರಗಳನ್ನು ಒಡೆದ ಅಪಖ್ಯಾತಿಗೆ ಒಳಗಾಗಿದೆ.ಗಂಡ ಎರಡು ಟೊಮ್ಯಾಟೊ ಹಣ್ಣು ಹಾಕಿ ಅಡುಗೆ ಮಾಡಿದ ಎಂದು ಮುನಿದ ಹೆಂಡತಿ ಜಗಳವಾಡಿಕೊಂಡು ಮನೆ ಬಿಟ್ಟು ತವರು ಮನೆಗೆ ಹೋದ ಬಗ್ಗೆ ಹೊರ ರಾಜ್ಯದಿಂದ ವರದಿಯಾಗಿದೆ.

ರುಚಿಯಿರಲಿ ಎಂದು
ಎರಡು ಟೊಮ್ಯಾಟೊ ಹೆಚ್ಚು
ಹಾಕಿ ಅಡುಗೆ ಮಾಡಿದೆ |
ಬೇಸರಗೊಂಡು ತವರು
ಮನೆಗೆ ಹೊರಟೇ ಬಿಟ್ಟಳು
ನನ್ನ ಮುದ್ದಿನ ಮಡದಿ ||

ಎಂದು ವರ ಪರಿತಪಿಸುತ್ತಿದ್ದಾನೆ.
ಇದಕ್ಕೆ ವಿರುದ್ಧವಾಗಿ ನೆರೆಮನೆಯವನು ಟೊಮ್ಯಾಟೊ ತರದೇ ತನ್ನ ಹೆಂಡತಿಗೆ ಗೋಳಾಡಿಸಿ ಯಾಮಾರಿಸಿದ್ದಾನೆ.

ಮಾರುಕಟ್ಟೆಗೆ ಹೋಗಿ
ಟೊಮ್ಯಾಟೊ ತನ್ನಿ ಎಂದು
ಗಂಡನಿಗೆ ಹೇಳುತ್ತಿದ್ದಾಳೆ ತಟ್ಟಿ ತಟ್ಟಿ|
ಹುಣಸೆ ಹಣ್ಣು ಹಾಕಿ
ಅಡುಗೆ ಮಾಡಿ ಬಿಡೆ
ಟೊಮ್ಯಾಟೊ ಆಗಿದೆ ತುಟ್ಟಿ ತುಟ್ಟಿ||

ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೊ ಹಾರ ಹಾಕಿಕೊಂಡು ಓಡಾಡುವ ಜನರು ಅಲ್ಲಲ್ಲಿ ಕಾಣಬಹುದು

ಮೊದಲು ನನ್ನವಳು ವರಾತ
ತೆಗೆಯುತ್ತಿದ್ದಳು ಎಂದು
ಕೊಡಿಸುವಿರಿ ಬಂಗಾರದ
ಕಾಸಿನ ಸರ, ಅವಲಕ್ಕಿ ಸರ|
ಈಗ ವರಸೆ ಬದಲಿಸಿದ್ದಾಳೆ
ಕೊಡಿಸಿ ಸಾಕು ಒಂದು
ಟೊಮ್ಯಾಟೊ ಸರ ಅವಳಿಗೂ
ತಿಳಿದುಹೋಗಿದೆ ಏರಿದ ಟೊಮ್ಯಾಟೊ ದರ ||

ಟೊಮ್ಯಾಟೊ ಬಗ್ಗೆ ಮಾತನಾಡುವಾಗ
ಮತ್ತಷ್ಟು ಸ್ವಾರಸ್ಯಕರ ಸಂಗತಿಗಳು ನಮ್ಮ ಗಮನ ಸೆಳೆಯುತ್ತವೆ.
ಕೆಂಪು ಬಣ್ಣದಲ್ಲಿ ಇರುವುದು ಮಾತ್ರ ಟೊಮೆಟೊ ಅಲ್ಲ. ಬದಲಿಗೆ ಹಳದಿ, ಗುಲಾಬಿ, ನೇರಳೆ, ಕಪ್ಪು ಹಾಗೂ ಬಿಳಿ ಬಣ್ಣಗಳ ಟೊಮೆಟೊಗಳು ಇವೆ.
ಯುರೋಪ್ನಲ್ಲಿ ಮೊದಲ ಬಾರಿಗೆ ಬೆಳೆದ ಟೊಮೆಟೊ ಹಳದಿ ಬಣ್ಣದ್ದಾಗಿತ್ತು. ಹೀಗಾಗಿ ಅಲ್ಲಿ ಇದನ್ನು ಆರಂಭದಲ್ಲಿ 'ಪೊಮೊ ಡಿ'ಒರೊ' (ಚಿನ್ನದ ಸೇಬು) ಎಂದು ಕರೆಯಲಾಗಿತ್ತು,
ಜಗತ್ತಿನಾದ್ಯಂತ ಟೊಮೆಟೊದ ಸುಮಾರು 10 ಸಾವಿರ ತಳಿಗಳಿವೆ ಎಂದು ಸಸ್ಯ ವಿಜ್ಞಾನಿಗಳು ಹೇಳುತ್ತಾರೆ.
ಅಮೆರಿಕಾದ ಫ್ಲೋರಿಡಾದಲ್ಲಿರುವ ವಾಲ್ಟನ್ ಡಿಸ್ನಿ ರೆಸಾರ್ಟ್ನಲ್ಲಿ ಈವರೆಗೂ ಪತ್ತೆಯಾದ ಟೊಮೆಟೊ ಗಿಡಗಳಲ್ಲಿ ಅತ್ಯಂತ ದೊಡ್ಡದು.
ಈ ಗಿಡ 56.73 ಚದರ ಮೀಟರ್ನಷ್ಟು ವ್ಯಾಪ್ತಿ ಹೊಂದಿದೆ. ಹಾಗೆಯೇ ಜಗತ್ತಿನ ಅತಿ ದೊಡ್ಡ ಟೊಮೆಟೊ 1986ರಲ್ಲಿ ಅಮೆರಿಕಾದ ಒಕ್ಲಹೊಮಾದಲ್ಲಿ ಪತ್ತೆಯಾಗಿತ್ತು. ಒಂದು ಟೊಮೆಟೊ3.5 ಕೆ.ಜಿ. ತೂಗುತ್ತಿತ್ತು. ಸ್ಪೇನ್ನಲ್ಲಿ ನಡೆಯುವ ಲಾ ಟೊಮಾಟಿನಾ ಎಂಬ ವಾರ್ಷಿಕ ಹಬ್ಬದಲ್ಲಿ ಸುಮಾರು 1.5ಲಕ್ಷ ಟೊಮೆಟೊವನ್ನು ಹೋಳಿ ಹಬ್ಬದ ಬಣ್ಣದ ರೀತಿಯಲ್ಲಿ ಜನರು ಪರಸ್ಪರ ಎರಚಿಕೊಂಡು ಸಂಭ್ರಮಿಸುತ್ತಾರೆ. ಈ ವರ್ಷ ಆಗಸ್ಟ್ 30ರಂದು ಈ ಹಬ್ಬಕ್ಕೆ ದಿನಾಂಕ ನಿಗದಿಯಾಗಿದೆ.
ಹೀಗೆ ಟೊಮ್ಯಾಟೊ ಪುರಾಣ ಹೇಳುತ್ತಾ ಹೊರಟರೆ ಮುಗಿಯುವುದಿಲ್ಲ. ಏರಿರುವ ಕೆಂಪಣ್ಣಿನ ದರ ಇಳಿಯಲಿ ರೈತರು ಮತ್ತು ಗ್ರಾಹಕರ ಮೊಗದಲ್ಲಿ  ಆದರ್ಶ ದರದಿಂದ ಮಂದಹಾಸ ಮೂಡಲಿ ಕೆಂಪಾದ ಹಣ್ಣಿನ ಪರಿಣಾಮವಾಗಿ ಮನಸ್ತಾಪವಾದ ಮನಗಳು ಒಂದುಗೂಡಲಿ ಎಂಬುದೇ ನಮ್ಮ ಆಶಯ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

07 ಜುಲೈ 2023

ಕೆಂಬಳಲಿನಲ್ಲಿ ಅರಳಿದ ಸುಮ


 


ಕೆಂಬಳಲಿನಲ್ಲಿ ಅರಳಿದ ಸುಮ...


ಭಾನುವಾರ ಹಿಂದೂ ಪತ್ರಿಕೆ ಓದುವಾಗ ಒಬ್ಬ ವಿದ್ಯಾರ್ಥಿ ಹತ್ತತರ ನಾಲ್ಕು ಕೋಟಿ ಫೆಲೋಶಿಪ್ ಪಡೆದು ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಮಾಡಲು ಆಯ್ಕೆಯಾಗಿರುವುದು ಕೇಳಿ ಬಹಳ ಸಂತಸವಾಗಿ ಲೇಖನ ಓದಿದಾಗ ಆ ಹುಡುಗ ಕೆಂಬಳಲು ಗ್ರಾಮದವನು ಎಂದು ಗೊತ್ತಾಗಿ ನನ್ನ ಸಹೋದ್ಯೋಗಿಗಳಾದ ಕೋಟೆ ಕುಮಾರ್ ರವರು  ಅದೇ ಗ್ರಾಮದವರೆಂದು ನೆನಪಾಗಿ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಯಶವಂತ್ ಮಹೇಶ್ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದರು.ಜೊತೆಗೆ ನಮ್ಮ ಊರು ಮತ್ತು ನಾಡಿಗೆ ಕೀರ್ತಿ ತಂದ ಯುವಕನ ಸಾಧನೆಗೆ ಅವರು  ಹೆಮ್ಮೆ ಪಟ್ಟರು.


ಕರ್ನಾಟಕದ ಈ  ವಿದ್ಯಾರ್ಥಿಯ ಸಾಧನೆಯನ್ನು ದೇಶವೇ ಕೊಂಡಾಡುತ್ತಿದೆ. ತುಮಕೂರಿನ ಯಶವಂತ್ ಮಹೇಶ್ ಇದೀಗ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಜೈವಿಕ ಇಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಅಧ್ಯಯನಕ್ಕಾಗಿ 3.8 ಕೋಟಿ ರೂಪಾಯಿ ಫೆಲೋಶಿಪ್ ಪಡೆದಿದ್ದಾರೆ.  ಸದ್ಯ ಬೆಂಗಳೂರಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸಂಶೋಧನಾ ಸಹಾಯಕರಾಗಿರುವ ಮಹೇಶ್ ಯಶವಂತ್, ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SIT) ಜೈವಿಕ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ 

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಅಮೆರಿತ ಪ್ರತಿಷ್ಠಿತ ಯುನಿವರ್ಸಿಟಿಗಳಲ್ಲಿ ಒಂದು. ಇದು ಅಮೆರಿಕದ ಅತ್ಯಂತ ಹಳೆಯ ಸಂಸ್ಥೆಯಾಗಿದೆ.  ಇದೇ ವಿಶ್ವವಿದ್ಯಾಲಯದಲ್ಲಿ ಕೋವಿಡ್ ವೈರಸ್ ವಿರುದ್ದ ಸಮರ್ಥವಾಗಿ ಹೋರಾಡಬಲ್ಲ MRNA ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಇದೀಗ ಇದೇ ವಿಶ್ವವಿದ್ಯಾಲದಲ್ಲಿ ಡಾಕ್ಟರೇಟ್ ಅಧ್ಯಯನಕ್ಕೆ ಯಶವಂತ್ ಮಹೇಶ್ 3.8 ಕೋಟಿ ರೂಪಾಯಿ ಫೆಲೋಶಿಪ್ ಪಡೆದಿದ್ದಾರೆ. ಕ್ಯಾನ್ಸರ್ ಸಿಸ್ಟಮ್ಸ್ ಬಯಾಲಜಿ ಲ್ಯಾಬೊರೇಟರಿನಲ್ಲಿ ಸಂಶೋಧನೆ ಮಾಡುತ್ತಿರುವ ಯಶವಂತ್ ಮಹೇಶ್, ಇದೀಗ ಈ ಅವಕಾಶಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. "ಜೈವಿಕ ಎಂಜಿನಿಯರಿಂಗ್‌ನಲ್ಲಿ ಪಿಹೆಚ್‌ಡಿ ಮಾಡುತ್ತಿದ್ದೇನೆ. ಈ ಕೋರ್ಸ್ 5 ವರ್ಷವಿದೆ. ಇದೀಗ ನೇರವಾಗಿ ನಾನು ಪಿಹೆಚ್‌ಡಿಗೆ ಆಯ್ಕೆಯಾಗಿದ್ದೇನೆ. ಅದರಲ್ಲೂ ಸಂಪೂರ್ಣ ಫೆಲೋಶಿಪ್ ಲಭ್ಯವಾಗಿದೆ "ಎಂದಿದ್ದಾರೆ. 


ಯಶವಂತ್ ಮಹೇಶ್ ರೈತ ಕುಟುಂಬದಿಂದ ಬಂದ ಪ್ರತಿಭಾನ್ವಿತ ವಿದ್ಯಾರ್ಥಿ. ತುಮಕೂರಿನ ಸಿದ್ದಗಂಗಾದಲ್ಲಿ ವಿಧ್ಯಾಭ್ಯಾಸ ಮುಗಿಸಿದ ಯಶವಂತ್ ಮಹೇಶ್ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.  ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ಕೆಂಬಾಳು ಗ್ರಾಮದ ನಿವಾಸಿಯಾಗಿರುವ ಯಶವಂತ್ ಮಹೇಶ್ ಅಧ್ಯಯನದಲ್ಲಿ ಹಲವು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇನಿಶಿಯೇಟಿವ್ ಫಾರ್ ರಿಸರ್ಚ್ ಅಂಡ್ ಇನ್ನೋವೇಶನ್ ಇನ್ ಸೈನ್ಸ್ (IRIS), ನ್ಯಾಷನಲ್ ಸೈನ್ಸ್ ಫೇರ್ 2012ರ ಯೋಜನೆಯಲಲ್ಲಿ ಯಶವಂತ್ ಮಹೇಶ್ ಚಿನ್ನದ ಪದಕ ಪಡೆದಿದ್ದಾರೆ. ಅಮೆರಿಕದ  ಫೀನಿಕ್ಸ್‌ನಲ್ಲಿ ವಾರ್ಷಿಕ ಇಂಟೆಲ್ ಇಂಟರ್‌ನ್ಯಾಶನಲ್ ಸೈನ್ಸ್ ಆಫ್ ಎಂಜಿನಿಯರಿಂಗ್ ಫೇರ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕಿರಿಯ ವಿದ್ಯಾರ್ಥಿ ಅನ್ನೋ ಹೆಗ್ಗಳಿಕೆಗೂ ಯಶವಂತ್ ಮಹೇಶ್ ಪಾತ್ರರಾಗಿದ್ದರು. ಕರ್ನಾಟಕದ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ನೀಡುವ ಜ್ಯೂನಿಯರ್ ವಿಜ್ಞಾನಿ ಪ್ರಶಸ್ತಿಯನ್ನು ಯಶವಂತ್ ಮಹೇಶ್ ಪಡೆದುಕೊಂಡಿದ್ದಾರೆ. ಇದೀಗ ಮಹೇಶ್ ಸಾಧನೆಯನ್ನು ಪೋಷಕರು, ಕುಟುಂಬಸ್ಥರು ಕೊಂಡಿದ್ದಾರೆ. ಅಮೆರಿಕದಲ್ಲಿ ಡಾಕ್ಟರೇಟ್ ಅಧ್ಯಯನದ ಖರ್ಚು ವೆಚ್ಚ ಸಂಪೂರ್ಣವಾಗಿ ಇದೇ ಫೆಲೋಶಿಪ್‌ನಿಂದ ಸುಲಭವಾಗಲಿದೆ.


ಛಲಬಿಡದೆ ತಮ್ಮ ಗುರಿಯೆಡೆಗೆ ಸಾಗಿದರೆ ಸಾಧನೆ ಅಸಾಧ್ಯವಲ್ಲ ಎಂಬುದನ್ನು ಯಶವಂತ್ ಮಹೇಶ್ ತೋರಿಸಿಕೊಟ್ಟಿದ್ದಾರೆ.ಇಂದಿನ ಯುವಕರಿಗೆ ಮತ್ತು ಶಾಲಾ ಮಕ್ಕಳಿಗೆ ಯಶವಂತ್ ಮಾದರಿಯಾಗಲಿ ಎಂಬುದೇ ನಮ್ಮ ಆಶಯ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.