26 September 2023

ಪರಿಸರಪ್ರಿಯ ಮತ್ತು ಆಸ್ತಿಕರ ಮೆಚ್ಚಿ‌ನ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ

 



ಸರ್ಪ ಸಂಸ್ಕಾರದ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ.


ಕರ್ನಾಟಕದ ಶ್ರೀಮಂತ ದೇಗುಲಗಳಲ್ಲಿ ಒಂದು ಕುಕ್ಕೆ  ಸುಬ್ರಹ್ಮಣ್ಯ ದೇವಾಲಯ. ಆಸ್ತಿಕರ ಪಾಲಿಗೆ ಕುಕ್ಕೆ ಎಂದೇ ಹೆಸರಾದ ಈ ದೇವಾಲಯ ಇರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ನಾಗಾರಾಧನೆ, ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರಕ್ಕೆ  ಹೆಸರಾದ ಈ ಕ್ಷೇತ್ರದಲ್ಲಿ ಪ್ರತಿದಿನವೂ ಒಂದಿಲ್ಲೊಂದು ವಿಶೇಷ ಪೂಜೆಗಳು ನಡೆಯುತ್ತವೆ ಷಷ್ಠಿ ದಿನಗಳು ಮತ್ತು ಮಂಗಳವಾರಗಳ ದಿನ ಹೆಚ್ಚು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುವರು. ನಾವು ಸಹ  ಧರ್ಮಸ್ಥಳದ ಸ್ವಾಮಿಯ ದರ್ಶನದ ನಂತರ ಕುಕ್ಕೆ ಗೆ ಹೋಗಿ ಸುಬ್ಬಯ್ಯನ ದರ್ಶನ ಪಡೆದೇ ಬರುವೆವು.

ರಮ್ಯ ಕಾಡಿನ ಮತ್ತು ಬೆಟ್ಟಗುಡ್ಡಗಳ ನಡುವೆ ಇರುವ ಈ ದೇವಾಲಯ ಪ್ರಕೃತಿ ಪ್ರಿಯರನ್ನು ಸಹ ಸೆಳೆಯುತ್ತದೆ. ಕುಮಾರ ಧಾರಾ ಮ

ನದಿಯ ಸ್ನಾನವೂ ಸಹ ಒಂದು ಸುಂದರ ಅನುಭೂತಿಯನ್ನು ನೀಡುತ್ತದೆ.

ಈ ದೇವಾಲಯದ ಬಗ್ಗೆ ಇರುವ ಒಂದು ಐತಿಹ್ಯ ಹೀಗಿದೆ.

ಹಿಂದೆ ಕಾಡು ಬೆಟ್ಟಗಳಿಂದ ಕೂಡಿದ 'ಪೊಸರ' ಎಂಬ ಸ್ಥಳದಲ್ಲಿ ಕುಕ್ಕ ಮತ್ತು ಲಿಂಗ ಎಂಬ ಸೋದರ ಮಲೆಕುಡಿಯರು ವಾಸವಾಗಿದ್ದರು. ಇವರು ಗೆಡ್ಧೆ ಗೆಣಸು ಸಂಗ್ರಹ ಮತ್ತು ಪ್ರಾಣಿ ಬೇಟೆಯಿಂದ ಜೀವನ ನಡೆಸುತ್ತಿದ್ದರು.ಬಿಲ್ಲು,ಬಾಣ ಪ್ರಯೋಗದಲ್ಲಿ ಪರಿಣಿತರಾದ ಇವರು ತಮ‍್ಮ ಪರಿವಾರದ ನಾಯಕರಾಗಿದ್ದರು. ಒಂದೊಮ್ಮೆ ಈ ಮಲೆಕುಡಿಯ ನಾಯಕರು ಬೇಟೆಯಾಡುವ ಸಲುವಾಗಿ ಪೂರ್ವಭಾಗದ ಮಲೆಗೆ ಹೋಗಿದ್ದರು. ಆಯಾಸ ಪರಿಹಾರಕ್ಕಾಗಿ ಕಲ್ಲಮೇಲೆ ಕುಳಿತಿರುವಾಗ ಸಂಜೆಯಾಗುತ್ತಿರುವ ಆ ಹೊತ್ತಿನಲ್ಲಿಕಾಡಿನ ಮಧ್ಯೆ ಭೀಕರ ಬೆಂಕಿಯ ಉರಿ ಆವರಿಸುತ್ತಿರುವುದು ಕಂಡಿತು. ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿರುವಾಗ ಇವರಿಗೊಂದು ಆರ್ತ ಧ್ವನಿ ಕೇಳಿಸಿತು. ಅತ್ತ ಕಡೆ ನೋಡಿದಾಗ ಒಂದು ಬಿದಿರಿನ ಹಿಂಡಿಲು ಉರಿಯುತ್ತಿರುವುದು ಗೋಚರಿಸಿತು. 'ಭಯ ಪಡಬೇಡಿ ನನ‍್ನನ್ನು ರಕ್ಷಿಸಿ ' ಎಂದು ಕೇಳಿ ಬರುತ‍್ತಿದ್ದ ಮನುಷ್ಯ ಸ್ವರದ ಕಡೆಗೆ ನೋಡಿದಾಗ ಉರಿಯುತ್ತಿರುವ ಬಿದಿರಿನ ಹಿಂಡಿನಲ್ಲಿ ಉರಿಯದೆ ಇದ್ದ ಒಂದು ಬಿದಿರಿನ ತುದಿಯಲ್ಲಿ ಸುರುಳಿಯಾಗಿ ಸುತ್ತಿ ಜೀವ ರಕ್ಷಣೆಗಾಗಿ ಒದ್ಧಾಡುವ ಸರ್ಪ ವೊಂದು ಗೋಚರಿಸಿತ್ತು. ಭಯ ಭೀತರಾದ ಕುಕ್ಕ-ಲಿಂಗರು ಅದನ್ನು ನೋಡಿದಾಗ  ಸರ್ಪ ಮನುಷ್ಯ ಸ್ವರದಲ್ಲಿ ಗಂಭೀರವಾಗಿ "ನೀವು ನನ್ನನ್ನು ರಕ್ಷಿಸಿದ್ದೇ  ಆದಲ್ಲಿ ಮುಂದೆ ನಿಮಗೆ ಒಳ್ಳೆಯದಾಗುವುದು" ಎಂದು ದಿವ್ಯವಾಣಿಯಲ್ಲಿ ಹೇಳಿತು. ಆಗ ಕುಲದೇವರಾದ ಲಿಂಗರೂಪಿ ಶಿವನ ಮೇಲೆ ಭಾರ ಹಾಕಿ ಕುಕ್ಕೆಲಿಂಗರು ತಮ್ಮ ಬೇಟೆಯ ಬಿಲ್ಲನ್ನು ಅದರ ಕಡೆಗೆ ನೀಡಿದರು. ಮಹಾಸರ್ಪವು ನೀಡಿದ ಬಿಲ್ಲಿಗೆ ಸುರುಳಿಯಾಗಿ ಸುತ್ತಿಕೊಂಡಿತು. ಸುತ್ತಿಕೊಂಡ ಹಾವು ನೀವು ಎಲ್ಲಿಯೂ ನೆಲಕ್ಕಿಡದೆ ಎತ್ತಿಕೊಂಡು ಪರ್ವತದ ತಪ್ಪಲಿಗೆ ಕೊಂಡೊಯ್ಯುವಂತೆ ಹೇಳಿತು . ಇಡಲೂ ಆಗದ ಎತ್ತಲೂ ಆಗದ ಮಹಾ ಗಾತ್ರದ ಸರ್ಪವನ್ನು ಕುಕ್ಕಲಿಂಗರು ತಮ್ಮ ಹೆಗಲಿನಲ್ಲಿಟ್ಟು ಕೊಂಡು ಇಳಿಜಾರಿನ ಪರ್ವತಗಳಲ್ಲಿ ಇಳಿದು ಬಂದರು. ಇಳಿಯುವಾಗ ಕಾಲು ಜಾರುವುದು ಸಹಜ ,ಹಾಗಾಗಿ ಆಧಾರಕ್ಕಾಗಿ 'ಕಾಡುಕುವೆ' ಎನ್ನುವ ಸಸ್ಯದ ದಂಡುಗಳನ್ನು ಊರಿಕೊಂಡು ಇಳಿದುಬರುತ್ತಾರೆ. ಬಿದಿರಿನ ಹಿಂಡಿಲಿನಿಂದ ಬಿಲ್ಲಿಗೆ ಸರ್ಪ ಸುತ್ತಿಕೊಂಡಾಗ ಆದ ಅಶರೀರವಾಣಿಯಂತೆ ಆಯಾಸಗೊಂಡ ಕುಕ್ಕ-ಲಿಂಗರು ಬೆಟ್ಟದ ತಪ್ಪಲಿಗೆ ಬಂದಾಗ ತಂಪಾದ ಸಮತಟ್ಟು ಸ್ಥಳ ಸಿಕ್ಕಿತ್ತು. ದೂರದ ಬೆಟ್ಟದಿಂದ ಇಳಿದು ಬಂದ ಇವರಿಗೆ ಆಯಾಸವೂ ಬಾಯರಿಕೆಯೂ ಆಗಿತ್ತು. ಈ ಸ್ಥಳದಲಿ ಕುಕ್ಕ-ಲಿಂಗರಿಗೆ ಏನೋ ವಿಶೇಷವಿದ್ದಂತೆ ಮನಸ್ಸಿನಲ್ಲಿ ಅನ್ನಿಸಿತ್ತು. ಹಿಂದೆ ಆಗಿರುವ ಅಶರೀರವಾಣಿಯಂತೆ ಕುಕ್ಕ ಹಾವನ್ನು ನೆಲದಲ್ಲಿ ಇಡಬಾರದೆನ್ನುವ ಕಾರಣಕ್ಕಾಗಿ ಎರಡು ಕೈಗಳಿಂದ ಬಿಲ್ಲನ್ನು ತಾನು ಹಿಡಿದು ನಿಂತು ತಮ್ಮ ಲಿಂಗನನ್ನು ನೀರು ತರಲು ಕಳುಹಿಸಿದ. ತಮ್ಮ ಲಿಂಗನು ಮಣ್ಣಿನ ಸಣ್ಣ ಕುಡಿಕೆ ಹಿಡಿದು ನೀರಿಗಾಗಿ ಹೊರಟಾಗ " ಇಲ್ಲಿಂದ ಮುಂದೆ ತೆಂಕಿಗೆ ಹೋಗು ಅಲ್ಲಿ ಅಮ್ರತ ಸುರಿವ ಬೈನೆ ಮರವಿದೆ, ನೀನು ಹತ್ತಿರ ಹೋದರೆ ಅದು ಬಾಗಿ ನಿನ್ನ ಗಡಿಗೆ ತುಂಬಿ ಬರುತ್ತದೆ. "  ಎಂದು ಧ್ವನಿ ಕೇಳಿ ಬಂತು. ಕೇಳಿ ಬಂದ ಧ್ವನಿಯಂತೆ ತೆಂಕಿಗೆ ಹೊರಟು ಹೋದಾಗ ಅಲ್ಲಿ ಬೈನೆ ಮರ ಬಿಟ್ಟರೆ ಬೇರೇನು ಲಿಂಗನಿಗೆ ಕಾಣಲಿಲ್ಲ.  ನೋಡುತ್ತಾ ನಿಂತ ಲಿಂಗನಿಗೆ ತಾನಾಗಿಯೇ ಬಾಗಿದ ಬೈನೆ ಮರ ಹಿಡಿದ ಗಡಿಗೆಗೆ ಹಾಲಿನಂತಹ ನೀರನ್ನು ಸುರಿದು ಹಿಂದಿನ ಸ್ಥಿತಿಗೆ ನಿಂತಿತು. ಇದರಿಂದ ಲಿಂಗನಿಗೆ ಇನ್ನಷ್ಟು ಭಯವಾಯಿತು. ಏನೇ ಆಗಲೀ ಇದೆಲ್ಲವನ್ನು ಅಣ್ಣ ಕುಕ್ಕೆಗೆ ತಿಳಿಸಬೇಕೆಂದು ಆತುರದಿಂದ ಹಿಂದಿರುಗಿ ಬರುತ್ತಿದ್ದಾಗ ಕಾಲು ಎಡವಿದ. ಗಡಿಗೆ ಕೈ ಜಾರಿತು, ಅದರಲ್ಲಿ ಅಮ್ರತದಂತಹ ನೀರು ಒಂದಷ್ಟುಚೆಲ್ಲಿತ್ತುಉಳಿದದ್ದು ಇಬ್ಬರಿಗೆ ಕುಡಿಯಲು ಸಾಲದೆಂದು ಹತ್ತಿರದಲ್ಲಿದ್ದ ನೀರನ್ನು ತುಂಬಿಸಿಕೊಂಡ. ಆಗ ಅದು ಶೇಂದಿಯಾಗಿ ಪರಿವರ್ತನೆಯಾಯಿತು.  ಲಿಂಗ ಗಡಿಗೆಯ ನೀರನ್ನು ಮೊದಲು ಕುಡಿದ. ಅವನು ಅಮಲಿನ ಮತ್ತಲ್ಲಿ ಅಣ್ಣ ಕುಕ್ಕನಿಗೆ ಕುಡಿಸುವ ಬದಲಿಗೆ ತಲೆಗೆ ಸುರಿದು ಬಿಟ್ಟ. ಆಗ ಹುತ್ತ ಅವನನ್ನು ಪೂರ್ಣವಾಗಿ ಮುಚ್ಚಿಬಿಟ್ಟಿತ್ತು. 'ಇನ್ನು ಮುಂದೆ ನೀನು ನಿನ್ನ ಪರಿವಾರದೊಂದಿಗೆ ನನ್ನನ್ನು ಆರಾಧಿಸಿಕೊಂಡು ಬಾ' ಎನ್ನುವ ಸ್ವರ ಕೇಳಿಬಂತು. ಆದರೆ ಪೂಜೆ , ಆರಾಧನೆ ಏನೂ ಅರಿಯದ ಲಿಂಗ ಹುತ್ತದ ಬಳಿಯೇ ಮಲಗಿದ ಅವನಿಗೆ"ನೀನು ಚಿಂತಿಸಬೇಡ ನನ್ನ ಸೇವೆಗಾಗೆ ಉತ್ತಮ ಬ್ರಾಹ್ಮಣ ಸಮುದಾಯವನ್ನು ನಿಯಮಿಸು" ಎಂಬ ಸ್ವರ ಕೇಳಿತು. ಪೂಜೆಗಾಗಿ ಬ್ರಾಹ್ಮಣನನ್ನು ಹುಡುಕುತ್ತಾ ಬಂದವನಿಗೆ ಒಂದು ಬ್ರಾಹ್ಮಣ ಕುಟುಂಬ ಸಿಕ್ಕಿತು. ರಾತ್ರಿ ಅಲ್ಲಿಯೇ ನಿದ್ದೆ ಹೋದ. ಆ ಮನೆಯ ಎಳೆಯ ಪ್ರಾಯದ ಮಗುವೊಂದನ್ನು ರಾತ್ರಿಯೇ ಹೊತ್ತುಕೊಂಡು ಕುಕ್ಕೆಗೆ ಬಂದ. ಬ್ರಾಹ್ಮಣ ವಿಧಿಗಳನ್ನು ನಡೆಸಲು ಕುಕ್ಕೆಯಲ್ಲಿ ಯಾರು ಇಲ್ಲದ ಕಾರಣ ತಾನೆ ಬ್ರಾಹ್ಮಣ ಮಾಣಿಗೆ ನೂಲನ್ನು ಹಾಕಿದ ಅಲ್ಲದೆ ತನ್ನ ಮಗಳನ್ನೆ ಮದುವೆ ಮಾಡಿದ. ಕುಕ್ಕ ಸರ್ಪಸಮೇತ ನೆಲೆಯಾದ ಸ್ಥಳವೇ ಆದಿಕುಕ್ಕೆ ಸುಬ್ರಾಯ ತಳವಾಯಿತು. ಮುಂದೆ ಕೊಕ್ಕಡದ ಯಡಪ್ಪಾಡಿತ್ತಾಯ ಕುಟುಂಬದಿಂದ ತಂದು ನೆಲೆಗೊಳಸಿದ. ಪುರೋಹಿತ ಮೂಲದಿಂದಲೇ ಪೂಜೆ ವಿಧಾನ ನಡೆದು ಬಂತು. ಅಲ್ಲದೆ ಕೊಕ್ಕಡದ ನುರಿತ್ತಾಯ ಕುಟುಂಬವೂ ಸಹಾಯಕವಾಗಿ ನೆಲೆಯಾಯಿತು.

ಇಂತಹ ದಿವ್ಯ ದೈವ ಸನ್ನಿಧಾನಕ್ಕೆ ನೀವು ಭೇಟಿ ನೀಡಿಲ್ಲ ಎಂದಾದರೆ ಒಮ್ಮೆ ಹೋಗಿ ಬನ್ನಿ. ಬೆಂಗಳೂರಿನಿಂದ ರೈಲು ಮತ್ತು ಬಸ್ ಗಳ ಸಂಪರ್ಕವಿರುವ ಈ ಸ್ಥಳ ಧರ್ಮಸ್ಥಳಕ್ಕೆ ಹತ್ತಿರವಿದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

No comments: