05 August 2022

ಧ್ವಜವೆಂದರೆ ಬಟ್ಟೆಯಲ್ಲ....

 



ವಿಮರ್ಶೆ ೪೬

ಧ್ವಜವೆಂದರೆ ಬಟ್ಟೆಯಲ್ಲ .

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ "ಘರ್ ಘರ್ ತಿರಂಗಾ" ಮನೆ ಮನೆಯಲ್ಲಿ ಬಾವುಟ" ಅಭಿಯಾನ ಸದ್ದು ಮಾಡುತ್ತಿದೆ. ಇದರ ಜೊತೆಯಲ್ಲಿ ಕೆಲ ದಿನಗಳ ಹಿಂದೆ  ಕೇಂದ್ರ ಸರ್ಕಾರವು ಧ್ವಜ ಸಂಹಿತೆಗೆ ಕೆಲವು ತಿದ್ದುಪಡಿಗಳನ್ನು ತಂದು ರಾತ್ರಿ ವೇಳೆಯಲ್ಲಿ ಸಹ ದ್ವಜ ಹಾರಾಡಿಸಬಹುದು ಎಂದು ಹೇಳಿದ್ದು ವಿವಾದಕ್ಕೆ ತಿರುಗಿದ್ದು ನಮಗೆ ತಿಳಿದೇ ಇದೆ.ನಮ್ಮ ಹೆಮ್ಮೆ ಹಾಗೂ  ಅಸ್ಮಿತೆಗಳಾದ ರಾಷ್ಟ್ರ ಧ್ವಜ ಹಾಗೂ ರಾಷ್ಟ್ರ ಲಾಂಛನಗಳ ಹೆಸರಿನಲ್ಲಿ  ವಿವಾದಗಳು ಉಂಟಾಗುತ್ತಿರುವುದು ಬೇಸರದ ಸಂಗತಿ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಪರ್ವ ಕಾಲದಲ್ಲಿ ಭಾರತೀಯರು ಹೆಮ್ಮೆಯಿಂದ ತಮ್ಮ ವಾಟ್ಸಪ್  ಡೀಪಿಗಳಲ್ಲೂ ನಮ್ಮ ತಿರಂಗಾ ಹಾಕಿಕೊಂಡಿರುವುದು ದೇಶಭಕ್ತಿಯ ಜೋಶ್ ನ ಸೂಚಕ ಎಂದರೂ ತಪ್ಪಾಗಲಾರದು.
ಈ ಹಿನ್ನೆಲೆಯಲ್ಲಿ  ಸಂತೋಷ್ ಜಿ ಆರ್ ರವರು ಬರೆದ ಪುಸ್ತಕ ಧ್ವಜವೆಂದರೆ ಬಟ್ಟೆಯಲ್ಲ ಎಂಬ ಪುಸ್ತಕ ನನ್ನ ಆಕರ್ಷಿಸಿತು. ಅದರ ಟ್ಯಾಗ್ ಲೈನ್ ಓದಿದಾಗ ಪುಸ್ತಕ ಓದಲೇ ಬೇಕೆಂದು ಕೈಗೆತ್ತಿಕೊಂಡೆನು. ಆ ಟ್ಯಾಗ್ ಲೈನ್ ಈಗಿತ್ತು. " ವೇದಗಳಿಂದ ವಿವಾದಗಳವರೆಗೆ.... ಸಾಗಿ ಬಂದ ಹಾದಿ".
ಪುಸ್ತಕ ಓದಿ ಮುಗಿಸಿದಾಗ ಒಂದು ಉತ್ತಮ ಆಕರಗ್ರಂಥ ಓದಿದ ಅನುಭವವಾಯಿತು.
ಜಿ.ಆರ್. ಸಂತೋಷ್ ಅವರು ಧ್ವಜವನ್ನು ವಸ್ತುವಾಗಿ ಆಯ್ಕೆ ಮಾಡಿಕೊಂಡು ಈ ಪುಸ್ತಕ ರಚಿಸಿದ್ದಾರೆ. ಇದು ಒಂದು ರೀತಿಯಿಂದ ನಮ್ಮ ದೇಶದ ವಿವಿಧ ಯುಗಗಳ ಧ್ವಜದ ಚರಿತ್ರೆ, ಆದರೆ ಕೇವಲ ರಾಜಮಹಾರಾಜರ ಧ್ವಜಗಳನ್ನು ಚರ್ಚಿಸದೆ, ಸಾಂಸ್ಕೃತಿಕವಾಗಿ ಮಹತ್ವ ಪಡೆಯುವ, ಜನಸಾಮಾನ್ಯರ, ಮಿಡಿತಕ್ಕೆ ಸ್ಪಂದಿಸುವ ಅಂಶಗಳನ್ನು ಚರ್ಚೆಗೆ ತಂದಿರುವುದು ಸ್ವಾಗತಾರ್ಹ. ಇದರೊಂದಿಗೆ ಹೊಯ್ಸಳ, ವಿಜಯನಗರ ಮೊದಲಾದ ರಾಜವಂಶಗಳ ಧ್ವಜದ ವಿವರಗಳಿವೆ. ಪಾಲಿ ಧ್ವಜದ ಕುರಿತ ವಿಶೇಷ ಅಂಶಗಳು ಒತ್ತಟ್ಟಿಗೆ ಬಂದಿವೆ.

ಸಂತೋಷ್ ಜಿ.ಆರ್ ಕನ್ನಡದ ಉದಯೋನ್ಮುಖ ಲೇಖಕರು ಮತ್ತು ಸಂಶೋಧನ ಪ್ರವೃತ್ತಿಯನ್ನು ಹೊಂದಿರುವ ಅಧ್ಯಯನಕಾರರು. ಸಂಸ್ಕೃತಿ, ತತ್ತ್ವಶಾಸ್ತ್ರ, ಸಾಮಾಜಿಕ ಹಾಗೂ ರಾಜಕೀಯ ಚಿಂತನೆ, ಆರ್ಥಿಕತೆ ಮತ್ತು ಸಂತುಲಿತ ಅಭಿವೃದ್ಧಿ ಈ ಕ್ಷೇತ್ರಗಳಲ್ಲಿ ಸಂಶೋಧನೆಯ ಕಾರ್ಯದಲ್ಲಿ ನಿರತವಾಗಿರುವ Foundation for Indic Research Studies (FIRST) ಸಂಸ್ಥೆಯಲ್ಲಿ ಆಡಳಿತಾಧಿಕಾರಿಗಳಾಗಿದ್ದಾರೆ.
ಇವರು ಮೂಲತಃ ವಿಜ್ಞಾನ ಪದವೀಧರರು, ಕಾರ್ಪೋರೇಟ್ ಉದ್ಯಮ ಕ್ಷೇತ್ರದಲ್ಲಿ ಮಾನವಸಂಪನ್ಮೂಲ ಮತ್ತು ಆಡಳಿತ ನಿರ್ವಹಣೆಯ ವಿಭಾಗಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾರ್ಥಿ ಮತ್ತು ಯುವಜನರಲ್ಲಿ ವ್ಯಕ್ತಿತ್ವವಿಕಾಸ ಹಾಗೂ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅನೇಕ ಸ್ವಯಂಸೇವಾ ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇತಿಹಾಸ, ಸಾಹಿತ್ಯ ಮತ್ತು ಪ್ರಾಚೀನ ವಿಜ್ಞಾನ ಪರಂಪರೆ ಇವರ ಆಸಕ್ತಿಯ ವಿಷಯ. ಇದರೊಟ್ಟಿಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರಜಾಗೃತಿಯ ಚಿಂತನೆಗಳನ್ನು ಹೊಂದಿರುವ ನೂರಾರು ಲೇಖನಗಳನ್ನು ಕನ್ನಡದ ಅನೇಕ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ.

ಪ್ರಸ್ತುತ ಪುಸ್ತಕದಲ್ಲಿ ಪ್ರಸ್ತಾವಿತ ಕೆಲ ಅಂಶಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.
ಧ್ವಜ, ರಾಷ್ಟ್ರಗೀತೆ ಇವು ನಮ್ಮಲ್ಲಿ ಬೆಚ್ಚನೆಯ ಭಾವನೆ ಮೂಡಿಸದಿದ್ದರೆ ಎಲ್ಲವೂ ವ್ಯರ್ಥ, ರಾಜಕಾರಣಿಯ ಚಾಲಾಕಿತನ, ಸಾಹಿತಿಯ ಆತ್ಮರತಿ, ಪತ್ರಕರ್ತನ ಸ್ವಯಂಘೋಷಿತ ಜ್ಞಾನ ಎಲ್ಲವನ್ನೂ ಮೀರಿದ ಎಳೆಯ ಹುಡುಗಿಯ ಚಂಚಲತೆ, ನಿಷ್ಟುರತೆ, ಕಾವ್ಯಮಯ ಬದುಕು ಧ್ವಜಕ್ಕಿದೆ. ಇಲ್ಲದಿದ್ದರೆ ನೂರಾರು ಸೈನಿಕರು ಧ್ವಜಕ್ಕಾಗಿ ರಕ್ತ ಸುರಿಸಿದ್ದನ್ನು ವಿವರಿಸುವುದು ಕಷ್ಟ, ಧ್ವಜ ಹಾರಿಸಲು ಆದೇಶ ಹೊರಡಿಸುವುದನ್ನು ಬಿಟ್ಟು ಬೇರೆ, ಹೃದಯ ಪರಿವರ್ತನೆಯ ದಾರಿಗಳನ್ನು ಅಧಿಕಾರದಲ್ಲಿರುವವರು ಯೋಚಿಸಬೇಕು.  ಸಂತೋಷ್ ರವರು ಬರೆದಿರುವ ಪುಸ್ತಕ ಇತಿಹಾಸ, ಪರಂಪರೆ ಕುರಿತು ಮೆಚ್ಚುಗೆ, ವಿಮರ್ಶೆ ಎರಡನ್ನೂ ಬೆಳೆಸಿಕೊಳ್ಳಲು ಸಹಾಯ ಮಾಡಿದರೆ ಅವರ ಪರಿಶ್ರಮ ಸಾರ್ಥಕ.  ಯಾವುದೇ ಇತಿಹಾಸದ ಅಧ್ಯಯನ ನಮ್ಮನ್ನು ಒಳಗೇ ನೋಯುವಂತೆ, ಮಾಗುವಂತೆ ಮಾಡಬೇಕು. ಭಾರತದ ಇತಿಹಾಸದಲ್ಲಿ ಧ್ವಜ ಒಂದು ಸಂಕೇತ. ಈಗ ಎಡ, ಬಲ ಎಂದು ಕೃತಕ ಪರಿಮಿತ ಗೆರೆ ಕುಯ್ದುಕೊಂಡು ಮುಕ್ತ ಚರ್ಚೆಯೇ ಸಾಧ್ಯವಾಗುತ್ತಿಲ್ಲ.

ಲೇಖಕರು ಈ ಪುಸ್ತಕದಲ್ಲಿ ಕೇವಲ ರಾಷ್ಟ್ರ ಧ್ವಜದ ಬಗ್ಗೆ ಮಾತ್ರ ಉಲ್ಲೇಖ ಮಾಡಿಲ್ಲ ಬದಲಾಗಿ ವಿವಿಧ ಪ್ರಕಾರದ ಧ್ವಜಗಳು ಅವುಗಳ ಅರ್ಥ ಮತ್ತು ಹಿನ್ನೆಲೆಗಳನ್ನು ಸಚಿತ್ರವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ರಾಮಾಯಣ ಮಹಾಭಾರತದ ಕಾಲದಲ್ಲಿ ಬಳಸಿಕೊಂಡು ಬಂದ ಧ್ವಜಗಳು ಅವುಗಳ ಅರ್ಥ ,ವಿಶ್ವವಿದ್ಯಾಲಯ ಮತ್ತು ರಾಷ್ಟ್ರ ಧ್ವಜದ ಬಗ್ಗೆ ವಿವರಗಳನ್ನು ನೀಡಿರುವರು.ಧ್ವಜ ಶಕುನಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಈ ಪುಸ್ತಕದಲ್ಲಿ ಬರುವ
ಕಣ್ಣುರಿಸಿದ ಹಸಿರು ಧ್ವಜ , ಶೌರ್ಯ ಸಾರಿದ ವೀರರು, ಮೇರೆ ಮೀರಿದ ಕನ್ನಡ ಧ್ವಜಗಳು, ವೀರ ಪರಂಪರೆಯ ಕರುನಾಡ ಧ್ವಜಗಳು ,ಪಾಲಿ ಧ್ವಜದ ವಿಶೇಷತೆ, ಪಾಲಿ ಧ್ವಜಾಧೀಶ ಇಮ್ಮಡಿ ಪುಲಕೇಶಿ,ವಿಶ್ವ ಸಾಮ್ರಾಜ್ಯ ಸ್ಥಾಪಿಸಿದ ರಾಷ್ಟ್ರಕೂಟರು,ಶಾರ್ದೂಲ ಧ್ವಜದ ವಿಜಯಗಾಥೆ, ವಿಜಯನಗರದ ವರಾಹ ಧ್ವಜ,ಕೆಳದಿಯ ಗಂಡಭೇರುಂಡ,ವಿಜಯ್ ಧ್ವಜಸ್ತಂಭಗಳು, ಧ್ವಜತಾರಿಣಿ ನಿವೇದಿತಾ, ಧ್ವಜಯುದ್ಧದಿಂದ ಸ್ವಾತಂತ್ರ್ಯದೆಡೆಗೆ,ಹಾರಾಡಿದ ಸ್ವಾತಂತ್ರ್ಯ ಧ್ವಜಗಳು,ಧ್ವಜಧಾರಿಣಿ ಮೇಡಂ ಕಾಮಾ, ಸ್ವರಾಜ್ಯ ಧ್ವಜ ಚರಕಾಂಕಿತ ತ್ರಿವರ್ಣ, ತ್ರಿವರ್ಣದ ವರ್ಣಸಂಕರ,ಧ್ವಜಾರ್ಪಣೆಗೊಂಡ ನವಸುಮಗಳು ,ಸುಭಾಷರ ವ್ಯಾಘ್ರ ಧ್ವಜ,ಆರೆಸ್ಸೆಸ್ ಮತ್ತು ರಾಷ್ಟ್ರ ಧ್ವಜ.,ಧ್ವಜವೇ ಗುರುವಾದಾಗ , ಕರ್ನಾಟಕದಲ್ಲಿ ಧ್ವಜ ಸತ್ಯಾಗ್ರಹಗಳು
ಮುಂತಾದ ಶೀರ್ಷಿಕೆಯ ಅಧ್ಯಾಯಗಳು ನಮಗೆ ವಿಶೇಷವಾದ ಜ್ಞಾನವನ್ನು ನೀಡುತ್ತವೆ.

ದೇಶವಿದೇಶಗಳಲ್ಲಿ ಈ ಪುಸ್ತಕದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬಂದಿದೆ ಕೆಲ ಗಣ್ಯರು ಈ ಪುಸ್ತಕದ ಬಗ್ಗೆ ಆಡಿರುವ ಮಾತುಗಳಲ್ಲಿ ಕೆಲವನ್ನು ಹೇಳುವುದಾದರೆ...
"ಮನೆ ಎಂದ ಮೇಲೆ ಅದಕ್ಕೊಂದು ಸೂರು ಇರಬೇಕಲ್ಲವೇ? ಸಮುದಾಯ ಎಂದರೆ ಅದಕ್ಕೊಂದು ಅಸ್ಮಿತೆ ಇರಬೇಕಲ್ಲವೇ? ದೇಶ ಎಂದ ಮೇಲೆ ಅದನ್ನು ಸಂಕೇತಿಸುವ ಹಲವು ಕಿರೀಟಗಳು ನಮಗೆ ಹೆಮ್ಮೆಯಲ್ಲವೇ? ಈ ಎಲ್ಲ ಪ್ರಶ್ನೆಗಳಿಗೆ ಅಕ್ಷರ ಲೋಕದಲ್ಲಿ ಉತ್ತರ ಕೊಟ್ಟ ಪುಸ್ತಕ 'ಧ್ವಜವೆಂದರೆ ಬಟ್ಟೆಯಲ್ಲ'- ಇದರಲ್ಲಿನ ವಿಷಯ ವಿಸ್ತಾರ, ಚಾರಿತ್ರಿಕ ನಿಖರತೆ, ಸತ್ಯದರ್ಶನ ನಮ್ಮ ಭಾರತೀಯತೆಯ ಹೆಮ್ಮೆಯನ್ನ ಮತ್ತು ಗರಿಮೆಯನ್ನ ಇನ್ನೂ ಗಟ್ಟಿಗೊಳಿಸುತ್ತದೆ. ಓದಿಗೆ ಮನನಕ್ಕೆ ಅರಿವಿಗೆ, ಇಂದು ಅರ್ಥೈಸಿಕೊಳ್ಳಬೇಕಾದ ಪುಸ್ತಕ, ಈ ಅಕ್ಷರ ಜ್ಞಾನ ಎಂದು ಟಿ. ಎಸ್. ನಾಗಾಭರಣ ರವರು ಅಭಿಪ್ರಾಯ ಪಟ್ಟಿದ್ದಾರೆ.
"ನಮ್ಮ ರಾಷ್ಟ್ರಧ್ವಜ ರೂಪುಗೊಂಡ ಬಗೆಯ ಇತಿಹಾಸವನ್ನು ತಿಳಿಸುವುದರೊಂದಿಗೆ ಸ್ವಾತಂತ್ರ್ಯ ಚಳವಳಿಯ ಸ್ವರೂಪದ ಪಕ್ಷಿನೋಟವನ್ನೂ ನೀಡುವ ಈ ಅಪೂರ್ವ ಕೃತಿಯು ಆದಷ್ಟೂ ಬೇಗ ಇಂಗ್ಲಿಷ್ ಮತ್ತು ನಮ್ಮ ದೇಶದ ಇತರ ಪ್ರಮುಖ ಭಾಷೆಗಳಿಗೂ ಅನುವಾದಗೊಂಡು ಭಾರತದ ಸಮಸ್ತ ಮನೆ ಮನಗಳನ್ನು ತಲುಪುವಂತಾಗಲಿ ಎಂಬುದೇ ನನ್ನ ಆಶಯ ಎಂದು ಇತಿಹಾಸ ತಜ್ಞರಾದ ಸುರೇಶ್ ಮೂನ ರವರು ಮೆಚ್ಚುಗೆ ಸೂಚಿಸಿದ್ದಾರೆ.
ಭಾರತೀಯರೆಲ್ಲರೂ ಸಹ ಇಂತಹ ಮೌಲಿಕ ಕೃತಿಯನ್ನು ಓದಿ ನಮ್ಮ ಧ್ವಜ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕಿದೆ
ನೀವೂ ಸಹ ಓದುವಿರಲ್ಲವೆ?

ಪುಸ್ತಕದ ಹೆಸರು: ಧ್ವಜವೆಂದರೆ ಬಟ್ಟೆಯಲ್ಲ .
ಲೇಖಕರು: ಸಂತೋಷ್ ಜಿ ಆರ್
ಪ್ರಕಾಶನ: ಹಂಸ ಪ್ರಕಾಶನ. ಬೆಂಗಳೂರು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


No comments: