12 February 2022

ಉದಕದೊಳಗಿನ ಕಿಚ್ಚು. ಭಾಗ ೧೮.

 



ತಿಪ್ಪೇರುದ್ರಸ್ವಾಮಿ ಬಸ್ ಹತ್ತಿದ ಮುಕುಂದಯ್ಯನಿಗೆ ಇಂದು ಏನೋ ಸಾಧನೆ ಮಾಡಿದ ಸಂತಸ .ಅಳಿಯನಿಗೆ ಒಳ್ಳೆಯ ಕಾಲೇಜು ಸೇರಿಸಿರುವೆ ,ಇವನು ಚೆನ್ನಾಗಿ ಓದಿ ಡಾಕ್ಟರ್, ಇಲ್ಲವೇ  ಇಂಜಿನಿಯರ್, ಇಲ್ಲ ಬಿಎಸ್ಸಿ ಒದಿ ಒಳ್ಳೆಯ ಕೆಲಸ ತಗಂಡೇ  ತಗಂತಾನೆ ಮುಂದೆ ಅವರಮ್ಮನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಮನದಲ್ಲಿ ಸಂತಸ ಪಡುತ್ತಾ ಕನಸ ಕಾಣುತ್ತಿದ್ದರು.

ಸತೀಶನಿಗೆ ಮಾತ್ರ ಮನಸ್ಸು ಸರಿಯಿರಲಿಲ್ಲ ,ಬಸ್ ನಿಲ್ದಾಣದ ಬಳಿ ಯಾರೊ ಹೇಳಿದ ಮಾತು ಇನ್ನೂ ಅವನ ಕಿವಿಯಲ್ಲಿ ಗುಯ್ ಗುಡುತ್ತಿತ್ತು. ಬೇಡವೆಂದರೂ ಏನೇನೂ ಕೆಟ್ಟ ಯೋಚನೆಗಳು ಬರತೊಡಗಿದವು. ಮತ್ತೊಮ್ಮೆ ದೇವರಲ್ಲಿ ಬೇಡಿದ ದೇವರೆ ಆ ಹುಡುಗಿ ನನ್ನ ಸುಜಾತ ಆಗಿರದಿರಲಿ! ಇಂದು ಈ ಬಸ್ ಯಾಕೆ ಇಷ್ಟು ನಿಧಾನವಾಗಿ ಹೋಗುತ್ತಿದೆ ,ಪ್ರೇಮಿಗಳ ಸಮಾಗಮಕ್ಕೆ  ಸಮಯ ನಿಧಾನವಾಗಿ ಚಲಿಸುವುದಂತೆ,ಅಥವಾ ದೀರ್ಘವಾಗಿ ಕಾಣುವುದಂತೆ, ಸಾವಾದ ಮನೆಗೆ ಅಥವಾ ಅಪಘಾತವಾದ ಸ್ಥಳ ನೋಡಲು ಹೊರಟರೆ ದಾರಿ ಬೇಗ ಸಾಗದಂತೆ .ಇಂದು ಅದೇಕೋ ನಿಜ ಎನಿಸತೊಡಗಿದೆ. ಹರ್ತಿಕೊಟೆ ಬಳಿ ಅಪಘಾತ ಆಗಿದೆ ಅಂದರು.ಈ  ಬಸ್ ಗೆ ಪವಾಡಪುರುಷ ತಿಪ್ಪೇರುದ್ರಸ್ವಾಮಿ ಎಂದು ಹೆಸರಿಟ್ಟಿದ್ದಾರೆ. ಇದು ನೋಡಿದರೆ ಒಳ್ಳೆಯ ಜಟಕಾ ಬಂಡಿ ಹೋದ ಹಾಗೆ ಹೋಗುತ್ತಿದೆ . ಮ್ಯಾಕಲೂರಹಳ್ಲಿ ಗೇಟ್ ದಾಟೋದಕ್ಕೆ ಇಷ್ಟು ಹೊತ್ತು ಬೇಕೆ? ಇನ್ನೂ ನೂರಾಮೂರುಗೇಟ್ ,ಬಾಲೇನಹಳ್ಳಿ ಗೇಟ್ ,ಚನ್ನಮ್ಮನಹಳ್ಳಿ ಗೇಟ್ ದಾಟಿ ಎರಡು ಕಿಲೋಮೀಟರ್ ದಾಟಿದರೆ ಸಿಗೋದು ಹರ್ತಿಕೋಟೆ .ಅಲ್ಲಿ ಯಾರಾದರೂ ಮಾಹಿತಿ ಹೇಳಬಹುದು, ದೇವರೆ ಅವಳಿಗೆ ಏನೂ ಅಗದಿರಲಿ,

.ಮತ್ತೆ ಮನದಲೆ ಅಂದುಕೊಂಡ ಸತೀಶ .

ಅಂತೂ ಬಸ್ ಹರ್ತಿಕೋಟೆಯ ಬಳಿ ಬಂದಿತು ಸತೀಶನ ಹೃದಯ ಬಡಿತ ಜೋರಾಯಿತು .ಬಸ್ ಎಡಗಡೆಯ ರಸ್ತೆಯ ಭಾಗದಲ್ಲಿ  ಒಂದು ಪಲ್ಟಿ ಹೊಡೆದಿದೆ ಎಂದು ಹೇಳಿದ ನೆನಪು "ಹರ್ತಿಕೊಟೆ...  ಹರ್ತಿಕೊಟೆ .... ಬಸ್ ಕ್ಲೀನರ್ ,ಮತ್ತು ಕಂಡಕ್ಟರ್ ವಿಭಿನ್ನವಾದ ಧ್ವನಿಯಲ್ಲಿ ಕೂಗಿ ಯಾರ್ ಇಳಿಯಾದ್ ಬರ್ರಿ .. "ಎಂದರು .

ಸತೀಶ ಸೀಟಿಂದ ಎದ್ದು ಇಳಿಯಲು ಹೊರಟ  "ಏ ಇದಿನ್ನ ಹರ್ತಿಕೊಟೆ ಕಣಲೆ ಕುತ್ಕ ಇನ್ನೂ ಯರಬಳ್ಳಿ ಬಂದಿಲ್ಲ ಇಂಗೆ ಪರ್ಪಾಟಾದರೆ ದಿನ ಕಾಲೇಜಿಗೆ ಎಂಗ್ ಓಡಾಡ್ತಿಯೋ? "

ವ್ಯಂಗ್ಯವಾಗಿ ಬೈಯ್ದರು ಮುಕುಂದಯ್ಯ .ಎರಡು ಮೂರು ಸೀಟಿನ ಜನರು ನಕ್ಕರು. ಬೇಸರದಿಂದ ಸೀಟಿನಲ್ಲಿ ಕುಳಿತ ಸತೀಶ. ಬಸ್ ಕಪಿಲೆ ಹಟ್ಟಿ ದಾಟಿ ,ಕಳವಿಭಾಗಿ ಗೇಟ್ ಆದಮೇಲೆ ದೊಡ್ಸೇತುವೆ ದಾಟುತ್ತಿದ್ದಂತೆ ಆ ಯರಬಳ್ಳಿ......ಬರ್ರಿ.....ಯರಬಳ್ಳಿ..,. ಎಂದು ರಾಗವಾಗಿ ಕೂಗಿದ ಕಂಡಕ್ಟರ್ .

ಬಸ್ ಇಳಿದ ತಕ್ಷಣ ಮತ್ತೆ ಅದೇ ಚಿಂತೆ ಅವಳ ಮನೆಗೆ ಹೋಗಿ ವಿಷಯ ತಿಳಿಯೆಲೆ? ಬ್ಯಾಡ ಮೊನ್ನೆ ಅವರ ಮನೆ ಹತ್ರ ಹೋದಾಗ "ಇಂಗೆಲ್ಲ ಪದೇ ಪದೇ ಮನೆ ಹತ್ರ ಬರ್ ಬಾರ್ದಪ್ಪ ಚೆನ್ನಾಗಿರಲ್ಲ" ಎಂದು ನಯವಾಗೆ ಬೈದಿದ್ದರು  ಸುಜಾತಳ ಅಮ್ಮ.ಮತ್ತೆ ಹೇಗೆ ವಿಷಯ ತಿಳಿಯೋದು ಎಂದು ತಲೆ ತಗ್ಗಿಸಿ ಮಾವನ ಹಿಂದೆ ನಡೆಯುವಾಗ 

" ಮುಕುಂದಣ್ಣ ಹಿರಿಯೂರಿಗೆ ಹೋಗಿದ್ರಾ?" ಹೆಣ್ಣು ಧ್ವನಿ ಕೇಳಿತು. ಮುಂದೆ ನೋಡಿದ ತನ್ನ ಕಣ್ಣ ತಾನೆ ನಂಬಲಿಲ್ಲ ಅದೇ ಸುಜಾತ! ಇದು ಕನಸಲ್ಲ ಎಂದು ತನ್ನನ್ನು ಜಿಗುಟಿಕೊಂಡು ಖಾತ್ರಿ ಮಾಡಿಕೊಂಡ

" ಊಂ ಕಣಮ್ಮ ಇವನ್ನ ಕಾಲೇಜಿಗೆ ಸೇರಿಸಿ ಬಂದೆ" 

" ನೀನ್ ಎಲ್ಲಿ ಸೇರಿದೆಮ್ಮ ಕಾಲೇಜಿಗೆ "

" ನಾಳೆ ನಾವು ಹಿರಿಯೂರಿಗೆ ಹೋಗ್ತಿವಿ ಅಣ್ಣ ,ಇವತ್ತು ನಾವು ಕಾಲೇಜ್ ಸೇರಾಕೆ ಬರ್ಬೇಕಾಗಿತ್ತು ನಮ್ಮಪ್ಪಗೆ ಚಳ್ಳಕೆರೆಲೇನೋ ಮೀಟಿಂಗ್ ಇತ್ತಂತೆ ಹೋದ್ರು . ಅದಕ್ಕೆ ಇವತ್ತು ಬರಲಿಲ್ಲ" ಸತೀಶನ ಮುಖ ನೋಡಿ ಹೇಳಿದಳು .

"ಸರಿ ಅಣ್ಣ ಅಂಗಡಿಗೆ ಟೀ ಪುಡಿ ತರಬೇಕು ಬತ್ತಿನಿ" ಎಂದು ಹೊರಟಳು.

ಮುಂದೆ ಹೋಗಿ ಹಿಂತಿರುಗಿ ನೋಡಿ ನಕ್ಕಳು , ಸತೀಶನೂ ಹಿಂತಿರುಗಿ ನೋಡಿದ ,ಸತೀಶ ನಗಲಿಲ್ಲ ,ಅವನಿನ್ನು ಶಾಕ್ ನಿಂದ ಹೊರಬಂದಿರಲಿಲ್ಲ ,ಸುಜಾತಾ ಕೈಯನ್ನು ಅಲ್ಲಾಡಿಸುತ್ತಾ ಹುಬ್ಬು ಮೇಲೇರಿಸಿ ಏನು? ಯಾಕೆ? ಎಂದು ಸನ್ನೆ ಮಾಡಿದಳು . ಅಷ್ಟರಲ್ಲಿ ಮುಕುಂದಯ್ಯ 

" ಯಾಕಲ ಹಿಂದಕ್ ಸರ್ಕಂಡೆ ಬಾರೋ ಮನೆ ಹತ್ರ ಬಂತು .ಅಜ್ಜಿಗೆ  ನೀನೆ ಮೊದ್ಲು ಹೇಳು ಕಾಲೇಜ್ ಸೇರ್ದೆ ಅಂತ ಖುಷಿಯಾಗುತ್ತೆ ಅಜ್ಜಿ " ಎಂದರು .

ಪ್ರತಿದಿನ ಬೆಳಿಗ್ಗೆ ಜೈರಾಂ ಬಸ್ಗೆ ಹೋಗಿ ಮಧ್ಯಾಹ್ನ ಎಸ್ .ಆರ್. ಇ 

.ಬಸ್ ಗೆ ಹಿಂತಿರುಗಿ ಬರುವುದು ಬಂದು  ಹೋಮ್ ವರ್ಕ್ ಮಾಡಿ, ಸಂಜೆ ಹೊತ್ತಿಗೆ ರೊಪ್ಪಕ್ಕೆ ಹೋಗಿ ಒಬ್ಬನೆ ಹುಲ್ಲು ತರುತ್ತಿದ್ದ ಆಗ ಗುರುಸಿದ್ದನ ನೆನಪಾಯಿತು. ಅವನಿದ್ದಿದ್ದರೆ ನನಗೆ ಸಹಾಯವಾಗುತ್ತಿತ್ತು ಎಂದುಕೊಂಡ ಸಂಜೆ ಹಾಲು ಕರೆಯಲು ಮುರಾರಿಗೆ ಸಹಾಯ ಮಾಡಿ   ,ಓದಿಕೊಳ್ಳಲು ಕುಳಿತರೆ ರಾತ್ರಿ ಏಳುವರೆ ಆಗಿರುತ್ತಿತ್ತು.


ಮೊದಲೆಡರಡು ದಿನ ಕಾಲೇಜ್ ಗೆ ಸುಜಾತ ಬಸ್ ಗೆ ಬರಲಿಲ್ಲ ಸೋಮವಾರ ಅಪ್ಪನ ಜೊತೆ ಬಂದು ಬಸ್ ಹತ್ತಿದಳು ಅಪ್ಪ ಬಸ್ ಹತ್ತಿಸಿ ಜೋಪಾನ ಎಂದು ಹೊರಟರು. ಇಂದೇಕೋ ಬಸ್ ಬೇಗ ಹಿರಿಯೂರಿಗೆ ಬಂದಂತಾಯಿತು ಸತೀಶನಿಗೆ .ಸರ್ಕಾರಿ ಆಸ್ಪತ್ರೆ ನಿಲ್ದಾಣದಲ್ಲಿ ಬಸ್ ನಿಂತಾಗ ಇಬ್ಬರೂ ಬಸ್ ಇಳಿದು ಮಾತನಾಡುತ್ತಾ ನಡೆದು ಸತೀಶ ಕಾಲೇಜು ಕಡೆ ತಿರುಗಿ "ಯಾಕೆ ಅಲ್ಲೆ ನಿಂತೆ ಬಾ ಒಳಗೆ "ಅಂದ .

" ನಂದು ಈ ಕಾಲೇಜ್ ಅಲ್ಲ ಅಗೋ ನೋಡು ಅದು ಎಂದು ಸ್ವಲ್ಪ ದೂರದಲ್ಲಿ ಇರುವ ಗಿರೀಶ ಕಾಲೇಜಿನ ಕಡೆ ತೋರಿಸಿದಳು" ಮತ್ತೊಂದು ಶಾಕ್ ನಿಂದ ಸತೀಶ

"ಅಯ್ಯೋ ಮೊದಲೆ ಗೊತ್ತಾಗಿದ್ದರೆ ನಾನು ಅಲ್ಲಿಗೆ ಸೇರುತ್ತಿದ್ದೆ." ಅಂದ 

"ಸತು ಅದು ಬರೀ ಹುಡಿಗೀರ ಕಾಲೇಜು ನೀನೇನ್ ಹುಡುಗೀನ ನಕ್ಕಳು .ಇವನು ನಗಲಿಲ್ಲ .

"ಮಧ್ಯಾಹ್ನ  ಎಸ್ ಆರ್ ಇ ಬಸ್ ಹತ್ತರ ಬತ್ತಿನಿ" ಅಂದು ಹೊರಟೇ ಹೋದಳು.


ಎಂತಾ ಕೆಲ್ಸ  ಆತಪ್ಪ ನಾನೇನೋ ಇಬ್ಬರೂ ಒಂದೆ ಕಾಲೇಜು ಸೇರ್ತಿವಿ ಅಂತ ಅಂದ್ಕೊಂಡ್ರೆ ಇವಳು ಅದ್ಯಾವುದೋ ಗಿರೀಶ ಕಾಲೇಜ್ ಸೇರ್ಬಿಟ್ಟಿದ್ದಾಳೆ ಇದೆಲ್ಲಾ ಅವರ್ಪಂದೆ ಕಿತಾಪತಿ ಎಂದು ಬೈಯ್ದುಕೊಳ್ಳುತ್ತಾ ಕಾಲೇಜು ಕಾಪೌಂಡ್ ದಾಟಿ ಒಳ ಹೋದಾಗ ಕಾಲೇಜ್ ಅಂಗಳದಲ್ಲಿ ಯಾರೂ ಇರಲಿಲ್ಲ ಅಯ್ಯೋ ಲೇಟ್ ಆಯ್ತು ಆಗಲೆ ಲೆಕ್ಚರ್ ಕ್ಲಾಸ್ ತೆಗಂಡದಾರೆ ಎಂದು ಜೋರಾಗಿ ಓಡಿದ.

" ಮೇ ಐ ಕಮ್ ಇನ್ ಸರ್"

"ವೈ ಆರ್ ಯು ಲೇಟ್ "

"ಸಾರ್ ನಮ್ಮೂರಿಂದ ಬರೋ ಬಸ್ ಲೇಟಾಯ್ತು ಸರ್" ಕನ್ನಡದಲ್ಲೇ ಹೇಳಿದ 

" ಪ್ರಂ ಟುಮಾರೋ ಆನ್ವರ್ಡ್ಸ ಯು ಮಸ್ಟ್ ಕಮ್ ಇನ್ಟೈಂ ಅಂಡರ್ಸ್ಟ್ಯಾಂಡ್ " ಗುಡುಗಿದರು ಲೆಕ್ಚರ್ .

ಒಕೆ ಸರ್ ಎಂದು ಬಂದು ಕೊನೆ ಬೆಂಚಲ್ಲಿ ಮಾತ್ರ ಜಾಗವಿದ್ದದರಿಂದ ಅಲ್ಲೇ ಕುಳಿತುಕೊಂಡ.

" ತೀಟಾಸ್ ಆರ್ ವೆರಿ ಇಂಪಾರ್ಟೆಂಟ್ ಇನ್ ಮ್ಯಾತಮ್ಯಾಟಿಕ್ಸ್ ಕಾಸ್ತೀಟಾ, ಸಿಕ್ಯಾನ್ ತೀಟಾ,................ಹೀಗೆ ಏನೇನೊ ಬರಿ ಇಂಗ್ಲೀಷ್ ನಲ್ಲಿ ಹೇಳುತ್ತಾ ಇದ್ದರು ಲೆಕ್ಚರ್ ಈ ಪದ ಯಾವುದನ್ನೂ ಸತೀಶ ಇದುವರೆಗೂ ಕೇಳೇ ಇಲ್ಲ ,  ಲೆಕ್ಚರರ್ ಇಂಗ್ಲೀಷ್ನಲ್ಲಿ ಪಾಠ ಮುಂದುವರೆಸಿ ಮಧ್ಯ ಮಧ್ಯ ಏನೇನೊ ಪ್ರಶ್ನೆ ಕೇಳುತ್ತಿದ್ದರು. ಮುಂದೆ ಕುಂತಿರೋ ಹುಡುಗಿಯರು ಪಟ ಪಟ ಇಂಗ್ಲೀಷ್ ನಲ್ಲೇ ಉತ್ತರ ಹೇಳುತ್ತಿದ್ದರು .ಅವರು ಗುಡ್ ಎನ್ನುತ್ತಿದ್ದರು.ಅವರು ಏನಾದರೂ ನನ್ನ  ಪ್ರಶ್ನೆ ಕೇಳಿದರೆ ಏನಪ್ಪ ಗತಿ ಮರ್ಯಾದೆ ಹೋಗೋದು ಗ್ಯಾರಂಟಿ ಎಂದುಕೊಂಡು  ದೇವರೆ ನನ್ನ ಪ್ರಶ್ನೆ ಕೇಳದಿರಲಿ ಆ ಲೆಕ್ಚರರ್ ಎಂದು ಮನದಲ್ಲೇ ಬೇಡಿದ .

ಅಂತೂ ಮ್ಯಾತ್ಸ್ ಪೀರಿಯಡ್ ಮುಗಿತು.

ಬಯಾಲಜಿ ಮೇಡಂ ಬಂದರು ಅವರೂ ಇಂಗ್ಲೀಷ್ ನಲ್ಲೇ ಪಾಠ ಶುರುಮಾಡಿದರು.ಸೆಂಟ್ ಆನ್ಸ್ , ಅಸಂಪ್ಷನ್ ಶಾಲೆಯಲ್ಲಿ ಓದಿದ ಹುಡುಗ, ಹುಡುಗಿಯರಂತೆ ಮೇಡಂ ಹೇಳೋಕು ಮುಂಚೆನೇ ಏನೇನೋ ಇಂಗ್ಲೀಷ್ನಲ್ಲಿ ಹೇಳುತ್ತಿದ್ದರು. ಮೇಡಂ ವೆರಿಗುಡ್ ಎಂದು ಮುಂದಿನ ಪಾಯಿಂಟ್ ಗೆ ಹೋಗುತ್ತಿದ್ದರು. ಈ ಪಿರಿಯಡ್ ಮುಗಿದರೂ ಸತೀಶನ ತಲೆಯಲ್ಲಿ ಒಂದೇ ಒಂದು ಪದ ಹೋಗಲಿಲ್ಲ.

ಕನ್ನಡ ಭಾಷೆಯ ಪಿರಿಯಡ್ ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಪಾಠ ಕೇಳುವಾಗ ಸತೀಶನಿಗೆ ನಾನಾವುದೋ ಬೇರೆ ರಾಜ್ಯ ಅಲ್ಲಲ್ಲ ಬೇರೆ ದೇಶಕ್ಕೆ ಬಂದ ಅನುಭವ ಆಗುತ್ತಿತ್ತು. 

"ಯರಬಳ್ಳಿಯಲ್ಲಿ ಎಲ್ಲರೂ ಬಂದು  ನನ್ನ ಮಾತನಾಡಿಸುತ್ತಿದ್ದರು, ನೋಟ್ಸ್ ಕೇಳುತ್ತಿದ್ದರು, ಡೌಟ್ ಕೇಳ್ತಿದ್ದರು ,ಎಲ್ಲಾ ಮೇಷ್ಟ್ರು ನನ್ನ ಎಷ್ಟು ಚೆನ್ನಾಗಿ ಮಾತಾಡುಸ್ತಿದ್ರು ,ಇಲ್ಲಿಗೆ ಬಂದು ಒಂದ್ ವಾರ ಆದ್ರೂ ಯಾರೂ ಪರಿಚಯ ಇಲ್ಲ ,ನಾನು ಇಲ್ಲಿ ಕಾಲೇಜಿಗೆ ಸೇರಲೇ ಬಾರದಾಗಿತ್ತು ನಮ್ಮ ಜಯರಾಮ  ಮಾವನ ಮಗ ಶಂಕರಣ್ಣ ಹೇಳಿದ್ದು ಈಗ ನೆನಪಿಗೆ ಬಂತು .

" ನೀನು ಕನ್ನಡ ಮೀಡಿಯಂ ನಲ್ಲಿ ಓದಿರೋದು ನಿನಗೆ ಸೈನ್ಸ್ ಕಷ್ಟ ಆಗುತ್ತೆ ಬ್ಯಾಡ  ಸುಮ್ಮನೆ ಯಾಕೆ ಆರ್ಟ್ಸ್ ತಗಂಡು ಓದು "ಎಂದು ಸಲಹೆ ನೀಡಿದರು  ಆದರೆ ಮುಕುಂದಯ್ಯ ಮಾವ ನನ್ ಏನು ಕೇಳಲೇ ಇಲ್ಲ ಅವರೆ ಮನಸ್ಸಲ್ಲಿ ಡಾಕ್ಟರ್ ಇಂಜಿನಿಯರ್ ,ಏನೇನೋ ಯೋಚನೆ ಮಾಡಿ ನನ್ ತಂದು ಇಲ್ಲಿ ಸೇರಿಸಿದರು .

ನಾನು ಹೇಗೆ ಓದಲಿ ಎಂದು ಯೋಚಿಸುತ್ತಿರುವಾಗಲೆ ಲಾಂಗ್ ಬೆಲ್ ಆಯ್ತು 

ಬಸ್ ನಿಲ್ದಾಣದ ಹತ್ತಿರ ಬಂದ ಸುಜಾತ ನಿಂತಿದ್ದಳು. ಅವಳ ಮುಖದಲ್ಲೂ ನಗುವಿಲ್ಲ .ಸತೀಶನೆ ಹತ್ತಿರ ಹೋಗಿ "ಯಾಕೆ ಡಲ್ ಆಗಿದಿಯಾ?" ಕೇಳಿದ.

" ಅವರ್ ಪಾಠ ಮಾಡೋದು ನನಗೇನು ಅರ್ಥ ಆಗ್ತಿಲ್ಲ " ಅಳಲು ಶುರುಮಾಡಿದಳು.

" ಹೇ ಅಂಗೆಲ್ಲ ಅಳಬೇಡ ಕಂಟ್ರೋಲ್ ಮಾಡ್ಕೊ ,ಯಾರಾದರೂ ನೋಡಿದರೆ ನಾನೇ ಏನಾದರೂ ಮಾಡಿದೆ ಅಂತ ತಪ್ಪು ತಿಳ್ಕೊತಾರೆ ." ಸಮಾಧಾನ ಮಾಡಿದ ಸತೀಶ.

ಬಸ್ ನಲ್ಲಿ ಇಬ್ಬರಿಗೂ ಸೀಟು ಸಿಗದೆ ನಿಂತಿದ್ದರು ಇನ್ನೂ ಅಳು ಮೋರೆ ಹಾಕಿ ನಿಂತಿದ್ದಳು ಸುಜಾತ .ಆ ಕಡೆ ಈ ಕಡೆ ನೋಡಿ ಅವರ ಊರವರು ಯಾರೂ ಇಲ್ಲ ಎಂದು ಖಚಿತಪಡಿಸಿಕೊಂಡು ಮೆಲ್ಲಗೆ 

" ನನಗೂ ನಮ್ಮ ಕಾಲೇಜಿನಲ್ಲಿ ಮಾಡೋ ಪಾಠ ಒಂಚೂರು ಅರ್ಥ ಆಗಲ್ಲ, ನಾವು ಸೈನ್ಸ್ ತಗಾಬಾರ್ದಾಗಿತ್ತು" ಅಂದ

" ನನಗೆ ಸೈನ್ಸ್ ಬ್ಯಾಡ ಅಂದೆ ನಮ್ಮಪ್ಪ ತಂದು ಸೇರಿಸಿಬಿಟ್ರು"

" ನೀನಾದ್ರೂ ನಿನಗೆ ಬ್ಯಾಡ ಅಂದೆ ನನಗೆ ಮಾತಾಡಾಕೆ ಅವಕಾಶ ಕೊಡ್ದೆ ನಮ್ಮಾವ ಕರ್ಕೊಂಡು ಬಂದು ಸೇರಿಸಿಬಿಟ್ರು ಏನ್ ಮಾಡೋದು ಕಷ್ಟ ಪಟ್ಟು ಓದೋಣ ಸಮಾಧಾನ ಮಾಡ್ಕೊ" ಎಂದ 

ಬಾಲೇನಹಳ್ಳಿ ಗೇಟ್ನಲ್ಲಿ ಎರಡು ಸೀಟು ಖಾಲಿಯಾದವು ಇಬ್ಬರೂ ಕುಳಿತರು.ಇನ್ನೂ ಬಿಕ್ಕುತ್ತಿದ್ದ ಸುಜಾತ ಸತೀಶನ ತೋಳೊಗೊರಗಿ  ಮಲಗೇ ಬಿಟ್ಟಳು .

ಯರಬಳ್ಳಿ ಬಂದಾಗ ಸತೀಶ ಅವಳನ್ನು ಎಬ್ಬಿಸಿ ಬಸ್ ಇಳಿದು , ಮೊದಲು ಸುಜಾತ ಅವರ ಮನೆ ಕಡೆ ನಡೆದಳು ಸ್ವಲ್ಪ ಹೊತ್ತಾದ ಬಳಿಕ ಸತೀಶ ನಡೆದ.


****************************

ಎರಡು ಮೂರು ತಿಂಗಳಾದ್ದರಿಂದ ಹಿರಿಯೂರಿನ ಬಹುತೇಕ ರಸ್ತೆಗಳು ಗಲ್ಲಿಗಳು ಪರಿಚಯವಾದವು ಸತೀಶನಿಗೆ.

ಸುಜಾತಳಿಗೆ ಕಾಲೇಜು ಬರು ಬರುತ್ತಾ ಬೋರ್ ಆಗತೊಡಗಿತು.

ಎರಡು ಮೂರು ಬಾರಿ ಕಾಲೇಜ್ ಗೆ ಚಕ್ಕರ್ ಹೊಡೆದ ಜೋಡಿಯು  ಕಡ್ಲೇಕಾಯಿ ಮಂಡಿ ಪಾರ್ಕ್ ನಲ್ಲಿ ಗಂಟೆ ಗಟ್ಟಲೆ ಹರಟೆ ಹೊಡೆದು ಮಧ್ಯಾಹ್ನದ ಬಸ್ ಗೆ ಸರಿಯಾಗಿ ಬಸ್ ನಿಲ್ದಾಣ ತಲುಪಿ ಮನೆಗೆ ತಲುಪುತ್ತಿದ್ದರು.


ಇದೇ ತರಹ ಕಾಲೇಜು ತಪ್ಪಿಸಿ ಪಾರ್ಕ್ ನಲ್ಲಿ ಕೂರುವ ಆಟ ಕಡ್ಲೇಕಾಯಿ ಮಂಡಿ ಪಾರ್ಕ್ ನಿಂದ ವಾಣಿ ಕಾಲೇಜು ತೋಪಿನ ವರೆಗೆ ಮುಂದುವರೆಯಿತು .

"ಸತೀಶನ ಬಳಿ ಮೈಗೆ ಮೈತಾಗಿಸಿ ಕುಳಿತಾಗ ವಯಸ್ಸಿಗೆ ಬಂದ ಹದಿಹರೆಯದ ಹುಡುಗ ಹುಡುಗಿಯರ ದೇಹ ಮನದಲ್ಲಾಗುವ ಬದಲಾವಣೆ ಇವರಿಬ್ಬರಲ್ಲೂ ಆಗುತ್ತಿತ್ತು.ಸುಜಾತ ಸ್ವಲ್ಪ ಹೆಚ್ಚಾಗಿ ಪ್ರತಿಕ್ರಿಯೆ ತೋರುತ್ತಾ, ಸತೀಶನ ಬಳಿ ಬಂದರೂ ಸತೀಶ ಬಹಳ ಸಂಯಮದ ವರ್ತನೆ ತೋರುತ್ತಿದ್ದ, ಕೆಲವೊಮ್ಮೆ ಅವನ ಈ ವರ್ತನೆ ಸುಜಾತಳಿಗೆ ಬೇಸರ ಆದರೂ ನನ್ನ ಹುಡುಗ ಒಳ್ಳೆಯವನು ಎಂದು ಮನದಲ್ಲೇ ಸಂತಸಪಡುತ್ತಿದ್ದಳು.

" ಸತೀಶ್ ನಾವು ಹೀಗೆ ಕಾಲೇಜ್ಗೆ ಹೋಗ್ದೇ ಟೈಮ್ ವೇಸ್ಟ್ ಮಾಡ್ತಾ ಇದ್ದರೆ ಪಾಸಾಗೋದೇಗೆ ?"

" ಓ ನಿನಗೆ ಪಾಸಾಗೋ ಆಸೆ ಇದಿಯಾ? ಇದುವರೆಗೆ ಪಾಠ ಏನೂ ತಲೆಗೆ ಹೋಗಿಲ್ಲ ಜೊತೆಗೆ ಈ ತರ ಸುತ್ತುತಾ ಇದಿವಿ   

ನಾನಂತೂ ಪೇಲ್ ಆಗೋನೆ ,ನೀನಾದ್ರೂ ಓದಿ ಪಾಸಾಗು "

" ನಾನೇನು ರ್ಯಾಂಕ್  ಬರೋ ಹಾಗೆ ಓದ್ತಾ ಇದಿನಾ?" ನಗುತ್ತಾ ಸತೀಶನ ಬಳಿ ಬಂದು ಅವನ ಮುಂದಲೆಯ ಕೂದಲಲ್ಲಿ ಕೈಯಾಡಿಸಿ ನಗುತ್ತಾ ಕೇಳಿದಳು.

" ನಾವು ಹೀಗೆ ಓಡಾಡೋದು ನಮ್ ಮಾವ ,ನಿಮ್ಮಪ್ಪ ಅಥವಾ ಬೇರೆ ಯಾರಿಗಾದ್ರೂ ಗೊತ್ತಾದ್ರೆ " ಮೂರ್ನಾಲ್ಕು ತಿಂಗಳು ಇಲ್ಲದ ಅಳುಕು ಕಾಣಿಸಿತು ಸತೀಶನಿಗೆ.

" ಗೊತ್ತಾಗ್ಲಿ ಬಿಡು ,ಒಳ್ಳೆದೇ ಆಗುತ್ತೆ ಮದುವೆ ಮಾಡ್ಸಿ ಅನ್ನೋಣ "

"ಅಯ್ಯೋ ನಿನ್ನ ,ಅದೇನ್ ಧೈರ್ಯನೆ ನಿನಗೆ,

ಸರಿ ಮದುವೆ ಮಾಡ್ತಾರೆ ಅಂದ್ಕೊಳ್ಳೊಣ ಜೀವನ ಮಾಡೋದ್ ಹೇಗೆ "

" ನನಗೆ ನಿನ್ನ ಬಗ್ಗೆ ಅಭಿಮಾನ ಇದೆ ,ನಂಬಿಕೆ ಇದೆ , ನೀನ್ ದುಡಿದು ನನ್ ಸಾಕ್ತಿಯಾ ಅಂತ ಮನಸು ಹೇಳ್ತೈತೆ"

" ಅಮ್ಮಣ್ಣಿ ನಿನ್ ಅಭಿಮಾನ ,ನಂಬಿಕೆ,ಮನಸು, ಇವೆಲ್ಲ ಹೊಟ್ಟೆ ತುಂಬ್ಸಲ್ಲ ಭಾಷಣ ಮಾಡಾಕೆ ಚೆನಾಗಿರುತ್ತೆ ಅಷ್ಟೇ "

"ಅದೆಲ್ಲ ನನಗ್ ಗೊತ್ತಿಲ್ಲ ನಾನಂತೂ ಡಿಸೈಡ್ ಮಾಡಿದಿನಿ ,ಅವತ್ತು ಒಂದು ವರ್ಷದ ಕೆಳಗೆ ಶಾಂತಮೂರ್ತಿ ಸರ್ ನಮ್ಮಿಬ್ಬ್ರೂನ ಕರ್ಸಿ ಬುದ್ದಿ ಹೇಳ್ದಾಗ ಒಂದು ವರ್ಷ ಆದ್ಮ್ಯಾಲೂ ನಿಮಗೆ ಪ್ರೀತಿ ಇದ್ದರೆ ಅದು ನಿಜ ಪ್ರೀತಿ ಅಂತ ನೆನಪಿದೆಯಾ ನಿನಗೆ ? ಈಗಲೂ ನಾವು ಪ್ರೀತಿ ಮಾಡ್ತಾ ಇದಿವಿ ಇದು ನಿಜ ಪ್ರೀತಿ ನಾವು ಮದುವೆ ಆಗೇ ಆಗ್ತಿವಿ" ಆತ್ಮವಿಶ್ವಾಸದಿಂದ ಮಾತನಾಡುತ್ತಾ ಇದ್ದಳು ಸುಜಾತ .

ಅವಳ ತೊಡೆಯ ಮೇಲೆ ತಲೆ ಇಟ್ಟು ಮಲಗಿದ ಸತೀಶ ಅವಳ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಾ "ನನ್ನ ಮೇಲೆ ನಿನಗೆ ಅದೆಷ್ಟು ಪ್ರೀತಿ ನಿನಗೆ ಒಂದು ವೇಳೆ ನಿಮ್ಮಪ್ಪ ನಮ್  ಪ್ರೀತಿ ಒಪ್ಪದಿದ್ದರೆ? " ಪ್ರಶ್ನಿಸಿದ ಅದೇ ವೇಳೆಗೆ ವಾಣಿ ಕಾಲೇಜಿನ ಬೆಲ್ ಹೊಡೆಯಿತು.

" ನಮ್ಮಪ್ಪ ಒಪ್ಪದಿದ್ದರೆ ಓಡಿ ಬರುವೆ ಮದುವೆ ಮಾಡಿಕೊಳ್ಳೋಣ" ಸ್ಪಷ್ಟವಾಗಿ 

ಧೈರ್ಯದಿಂದ ಹೇಳೆಬಿಟ್ಟಳು ಸುಜಾತ .

ಇವರಿಬ್ಬರ ಸಂಭಾಷಣೆ ಆಲಿಸುತ್ತಾ ,ಇವರ ಸುತ್ತಲೇ ಓಡಾಡುವ ಒಬ್ಬ ಇವರಿಗಿಂತ ಮೂರ್ನಾಲ್ಕು ವರ್ಷ ದೊಡ್ಡ ಹುಡುಗನನ್ನು ಗಮನಿಸಿದ ಸತೀಶ "ಯಾರಿವನು ಅವಾಗಿನಿಂದ ನಮ್ಮ ಮಾತು ಕೇಳ್ತಾ ,ನಮ್ಮನ್ನೆ ನೋಡ್ತಾ ಓಡಾಡ್ತಾನೆ , ಅವ್ನೇನಾದ್ರೂ ನಿಮ್ ಕಡೆನವ್ನೇನೋ ನೋಡಮ್ಮ". ಕಿಚಾಯಿಸಿದ ಸತೀಶ.

"ನಾನು ಅವನ್ ನ ಇವತ್ತೇ ನೋಡ್ತಿರೋದು . ಬಹುಶಃ ಅವರ್ಯಾರೋ ನಿನಗೆ ಹೆಣ್ ಕೊಡೊ ಮಾವನ ಕಡೇರು ಇರಬೇಕು ನೋಡು" ತಿರುಗೇಟು ನೀಡಿದಳು ಸುಜಾತ , ಯಾರು ಕೇಳೇ ಬಿಡೋಣ ಎಂದು ಎದ್ದು ಆ ವ್ಯಕ್ತಿ ಕಡೆ ಹೊರಟ ಸತೀಶ ,ದೊಡ್ಡ ಹೆಜ್ಜೆ ಹಾಕಿ ಜೋರಾಗಿ ನಡೆದು ಮಾಯವಾಗಿಬಿಟ್ಟ ಅವನು.

" ನಮ್ ಹೀರೋ ಎದ್ದರೆ ಯಾರೂ ನಿಲ್ಲಲ್ಲ" ಎಂದು ಅವನ ಹತ್ತಿರ ಹೋಗಿ ಅವನ ಎದೆಯಲ್ಲಿ ಮುಖವಿಟ್ಟು ತಬ್ಬಿಕೊಂಡಳು ಸುಜಾತ .

ಟೈಂ ಆಯ್ತು ನಡಿ ಬಸ್ ಸ್ಟ್ಯಾಂಡ್ ಗೆ ಹೋಗಾನ ಲೇಟ್ ಆದರೆ ಎಸ್. ಆರ್. ಇ. ಬಸ್ ಮಿಸ್ ಆಗುತ್ತದೆ. ಆಗ ನಿಮ್ಮಪ್ಪ ಯಾಕೆ ಲೇಟ್ ಅಂತ ಕ್ಲಾಸ್ ತೊಗೊತಾರೆ.

ಅದ್ ಸರಿ ಯಾರು ಅವನು?"  ಸತೀಶ ಮತ್ತೆ ಪ್ರಶ್ನೆ ಕೇಳಿದ.

 ಇಬ್ಬರೂ ಒಬ್ಬರಿಗೊಬ್ಬರು ಕೈಹಿಡಿದುಕೊಂಡು ಟಿ. ಬಿ .ಸರ್ಕಲ್ ಕಡೆ ಹೆಜ್ಜೆ ಹಾಕಿದರು. 


**************************

" ಅಜ್ಜಿ ದಿನಾ ಓಡಾಡೋದು ಕಷ್ಟ ಆಗುತ್ತೆ ,ಓದಾಕೆ ಟೈಂ ಸಿಗಲ್ಲ ಅಲ್ಲೇ ಹಿರಿಯೂರಲ್ಲಿ ರೂಂ ಮಾಡಿಕೊಂಡು ಓದುವೆ " ಎಂದು ಮೊದಲು ಸರಸ್ವತಜ್ಜಿ ಹತ್ತಿರ ಮನವಿ ಇಟ್ಟ ಸತೀಶ.

" ಅದೇನು ದಸರ ರಜಾ ವರಗೆ  ಓಡಾಡಿದೆ ಈಗ್ಯಾಕೆ ರೂಮು? ಪ್ರಶ್ನಿಸಿದರು ಮುಕುಂದಯ್ಯ.

"ಓದಾದು ಬಾಳ ಇರುತ್ತೆ ಮಾವ ,ಅದಕ್ಕೆ ...ಎಂದು ತಲೆ ಕೆರೆದುಕೊಂಡ." ಆತು ಎಲ್ಲಿ ರೂಂ ಮಾಡ್ತಿಯಾ? ಏನಾದರೂ ಗೊತ್ತ? '" 

ಕೇಳಿದರು ಮುಕುಂದಯ್ಯ.

ನಮ್ಮ ಊರಿನ ಸೆಕೆಂಡ್ ಇಯರ್ ನರಹರಿ ಈ ವರ್ಷ ಸೆಕೆಂಡ್ ಇಯರ್ ಪಿ ಯುಸಿ ಅವರ್ ರೂಮಲ್ಲಿ ಇಬ್ಬರೆ ಇರಾದು ನಾನೂ ಅವರ್ ಜೊತೆ ಇರ್ತಿನಿ" 

" ಒಹೋ  ಮೊದ್ಲೆ ಎಲ್ಲಾ ಪ್ಲಾನ್ ಮಾಡಿದ್ದಂಗಿದಿಯಾ ,ಅವನ್ ಸರಿ ಇಲ್ಲ ನರಹರಿ ಹುಷಾರು , ಸರಿ ಶುಕ್ರವಾರ ನೆಲವಳಿ ದುಡ್ ಬರಲಿ , ಭಾನುವಾರ ರೂಂಗೆ ಹೋಗುವಂತೆ" ಎಂದರು ಮುಕುಂದಯ್ಯ.


ಅಲ್ಲಿಗೆ ಸತೀಶನ ಜೀವನದ ಮತ್ತೊಂದು ಕರಾಳ ಅದ್ಯಾಯಕ್ಕೆ ಮುನ್ನುಡಿ  ಬರೆದಂತಾಯ್ತು.


"ಮೊದಲು ದಿನವೂ ನನ್ನ ಕಾಣಲು ಹಾತೊರೆಯುತ್ತಿದ್ದೆ ಈ ವಾರದಿಂದ ಒಮ್ಮೆಯೂ ಸಿಗಲಿಲ್ಲ " ಎಂದು ಮುನಿಸಿಕೊಂಡು ಕಡ್ಲೇಕಾಯ್ ಮಂಡಿ ಪಾರ್ಕ್ ನಲ್ಲಿ ಸ್ವಲ್ಪ ದೂರದಲ್ಲಿ ಅಳುಕಿನಿಂದಲೆ  ಕುಳಿತ ಸತೀಶನ ಬಳಿ ಬಂದವಳಿಗೆ ಸಿಗರೇಟಿನ ವಾಸನೆ  ಮೂಗಿಗೆ ಬಡಿಯಿತು ಸಿಟ್ಟಾಗಿ" ಇದೇನ್ ಸತೀಶ್ ಹಿರಿಯೂರಲ್ಲಿ ರೂಂ ಮಾಡಿದ್ದು ಇದಕ್ಕೆನಾ?  ಬರೀ ಸಿಗರೇಟಾ ಅಥವಾ ಬೇರೆ? "ಬೇಸರವಾಗಿ ದೂರದಲ್ಲಿ ಕುಳಿತಳು ,ನಾನು ಏನೋನೋ ಕನಸು ಕಂಡಿದ್ದೆ ನನ್ನ ಸ್ನೇಹಿತೆಯರಿಗೆ ನನ್ನ ಸತೀಶ  ಅಪರಂಜಿ , ಈಗ ನೋಡಿದರೆ ನಿನ್ನಲ್ಲಿ ಇಂತಹ ಬದಲಾವಣೆ ಕಂಡು ಬೇಸರವಾಗುತ್ತಿದೆ ಅಳಲುಶುರು ಮಾಡಿದಳು ಸುಜಾತ .

ಅವಳ ಹತ್ತಿರ ಹೋಗಿ ಸಮಾಧಾನ ಮಾಡಿ 

" ಕ್ಷಮಿಸು ಇನ್ನೆಂದೂ ಸಿಗರೇಟ್ ಸೇದೋಲ್ಲ " ಎಂದ ಸತೀಶ.

ಇದು ಬಹು ದೊಡ್ಡ ಸುಳ್ಳು ನಾನು ಈಗಾಗಲೇ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವೆ ಎಂದು ಅವನ ಅಂತರಾತ್ಮ ಹೇಳುತ್ತಿತ್ತು.


ಸಾಮಾನ್ಯವಾಗಿ ಬೇರೆಯವರ ಮನೆಯಲ್ಲಿ ಬೆಳೆಯುವ ಮಕ್ಕಳಿಗೆ ಒಂದು ರೀತಿಯ ಅಭದ್ರತೆ ,ಕೀಳರಿಮೆ ,ಪರತಂತ್ರ ಮನೋಭಾವ ಕಾಡುವವುದು. ಬೇರೆಯವರು ಎಷ್ಟೇ ಹತ್ತಿರದ ಸಂಬಂಧಿಗಳಾಗಿರಲಿ, ಎಷ್ಟೇ ಚೆನ್ನಾಗಿ ನೋಡಿಕೊಳ್ಳಲಿ ,ಎಲ್ಲೋ ಒಂದು ಕಡೆ ಸ್ವಂತ ಅಮ್ಮ ,ಅಪ್ಪ ,ಅಣ್ಣನ ಕಡೆ ಮನ ಹಾತೊರೆಯುವುದು.


ಸತೀಶನಿಗೆ ಅವನ ಮಾವಂದಿರು, ಅಜ್ಜಿ ತಿಮ್ಮಕ್ಕ, ಎಲ್ಲರೂ ಚೆನ್ನಾಗಿ ನೋಡಿಕೊಂಡರೂ ಅವನಿಗೆ ಅಷ್ಟು ಸ್ವತಂತ್ರವಿರಲಿಲ್ಲ ,ಇದು ಕೀಳರಿಮೆಗೆ ದಾರಿಯಾಯಿತು, ಹಿರಿಯೂರಿನಲ್ಲಿ ರೂಂ ಮಾಡಿದ ಮೇಲೆ ನರಹರಿಯಂತಹ ಕೆಟ್ಟ ಹುಡುಗನ ಜೊತೆಯಲ್ಲಿ ಇರುವಾಗ ಸಹವಾಸದಿಂದ ಸನ್ಯಾಸಿ ಕೆಡದಿರಲು ಸಾದ್ಯವೆ? 

ಆ ಪೀಸು ಈ ಫೀಸು ಎಂದು ಮುಕುಂದಯ್ಯ ರವರಿಂದ ಹಣ ಪಡೆದು 

ಅದ್ಯಾವುದೋ "ಮೈಸೂರು ಮಲ್ಲಿಗೆ" "ಭಟ್ಕಳ ಮಲ್ಲಿಗೆ" ಎಂಬ ನೋಡಬಾರದ ದೇವರ ಚಿತ್ರ ನೋಡಲು ಟಿ ವಿ ,ವಿ ಸಿ ಪಿ ಬಾಡಿಗೆ ತಂದು ರಾತ್ರಿ ನಿದ್ದೆಗೆಟ್ಟು ಓದುವ ಬದಲಿಗೆ ಅಶ್ಲೀಲ ಚಿತ್ರ ನೋಡುತ್ತ ಮದ್ಯ ಸೇವಿಸುತ್ತಾ ಕಾಲ ಕಳೆದು ,ಹಗಲೆಲ್ಲ ಮಲಗಿ ಕಾಲ ಕಳೆವುದು ದಿನಚರಿಯಾಯಿತು.

ಶಾಸ್ತ್ರಕ್ಕೆ ಪರೀಕ್ಷೆ ಬರೆದು ಮೊದಲ ವರ್ಷ ಎಲ್ಲಾ ವಿಷಯಗಳಲ್ಲಿ ಪೇಲಾದರೂ ಮನೆಯಲ್ಲಿ ಪಾಸಾಗಿರುವೆ ಎಂದು ಹೇಳಿದ್ದ. ಸುಜಾತಳಿಗೆ ಹೆಚ್ಚು ಸಿಗದೆ ತನ್ನದೇ ಲೋಕದಲ್ಲಿ  ಮುಳುಗಿದ್ದ. ಇದರಿಂದಾಗಿ ಸುಜಾತಳಿಗೆ ಅವನ ಮೇಲೆ ಪ್ರೀತಿ ಕಡಿಮೆಯಾಗಿರಲಿಲ್ಲ. ಬದಲಿಗೆ ಸಿಕ್ಕ ಸಮಯದಲ್ಲಿ ಓದಿ ಅಂತೂ ಮೊದಲ ಪಿ ಯು ಸಿ ಜಸ್ಟ್ ಪಾಸಾಗಿದ್ದಳು.

"ಹುಡುಗೀರು ಎಂಗೋ ಪಾಸ್ ಆಗ್ಬಿಡ್ತಾರೆ ಹುಡುಗ್ರೆ ಪೇಲಾಗೋದು ಎಂದು ನಶೆಯಲ್ಲಿ ಮಾತನಾಡಿದ  ನರಹರಿ ಮಾತು ಸತೀಶನಿಗೆ ನೆನಪಾಯಿತು.


ಬೇಸಿಗೆ ರಜೆಗೆ ಯರಬಳ್ಳಿಗೆ ಬಂದ ಸತೀಶನ ವರ್ತನೆಯಲ್ಲಿ ಬದಲಾವಣೆ ಗುರ್ತಿಸಿದ ಮುಕುಂದಯ್ಯ, ಒಮ್ಮೆ ಮಾರಮ್ಮನ ಗುಡಿಯ ಕಡೆಯಿಂದ ನರಹರಿ ಜೊತೆಯಲ್ಲಿ ತೂರಾಡುತ್ತ ಬರುವುದ ಕಂಡು ನೋಡಿದಾಗ ಕುಡಿದಿರುವುದು ಗಮನಕ್ಕೆ ಬಂದು ಮನೆ ಒಳಗೆ ಕರೆದುಕೊಂಡು ಹೋಗಿ ಬಾರುಕೋಲು ಸೇವೆ ಮಾಡಿದಾಗ 

" ಇನ್ನೆಂದೂ ಕುಡಿಯಲ್ಲ ಬಿಡು ಮಾವ,ತಪ್ಪಾತು ಬಿಡು ಮಾವ " ಎಂದು ಅರಚುವ ಸದ್ದು ಕೇಳಿ

"ಬಿಡೋ ಆಳಾಗ್ ಹೋಗ್ಲಿ ,ಇವನ್ ಹಿರಿಯೂರಿಗೆ ಕಳ್ಸಿದ್ದೆ ತಪ್ಪಾತು, ಏನೋ ಸೆಂದಾಗಿ ಓದ್ಲಿ ಅಂತ ಕಳ್ಸಿದರೆ ಊದೆದನೆ ಎಂದು ಕಣ್ಣೀರಿಟ್ಟರು ಹಿರಿಜೀವ.


"ನೀನೇನ್ ಓದಾದು ಬ್ಯಾಡ ದನ ಕಾಯಿ ನಾಳೆಯಿಂದ ಎಂಗೂ ಗುರುಸಿದ್ದ ಸಂಬಳ ಬಿಟ್ಟದಾನೆ ಬಿಸ್ಲಲ್ಲಿ ಹೋದರೆ ಗೊತ್ತಾಗುತ್ತೆ " ಗುಡುಗಿದರು ಮುಕುಂದಯ್ಯ.

ಅಂದಿನಿಂದ ಸತೀಶನ ಮೇಲೆ ಒಂದು ಕಣ್ಣಿಟ್ಟಿದ್ದ ದೊಡ್ಡಪ್ಪಗಳ ಕುಟುಂಬ ಅವನನ್ನು ಒಬ್ಬನನ್ನೆ ಎಲ್ಲಿಗೂ ಕಳಿಸುತ್ತಿರಲಿಲ್ಲ, ಸುಜಾತಳ ನೋಡದೆ, ಚಟಗಳ ಬಿಡಲಾರದೆ ಚಡಪಡಿಸತೊಡಗಿದ ,ಹೊಲ, ಮನೆ ಕೆಲಸ ಮಾಡುತ್ತ ಕೆಂಪಗಿದ್ದವನು ಕಪ್ಪಾದ,ತಿಂದುಂಡು ಗುಂಡಗಿದ್ದವನು ಬಡಕಲಾದ .


"ಪಾಪ ಇದೊಂದ್ ವರ್ಸ ಓದ್ಲಿ ಬಿಡೋ ಅಲ್ಲೇ ಎನೋ ಬದ್ಲಾಗ್ತಾನೆ " ಅಜ್ಜಿ ಮತ್ತೆ ಶಿಫಾರಸು ಮಾಡಿದರು.

ಸತೀಶನ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡ ಮುಕುಂದಯ್ಯ " ಆತು ಆ ನನ್ ಮಗ ನರಹರಿ ಸೇರ್ಬಾರದು.ರೂಂ ಗೀಂ ಬ್ಯಾಡ ದಿನ ಇಲ್ಲಿಂದ ಒಡಾಡು ಮತ್ತೇನಾದ್ರು ಆಟ ಆಡಿದ್ರೆ ಗೊತ್ತಲ್ಲ ಬಾರಿ ಕೋಲು " ಎಂದರು


ಅಂತೂ ಹಿರಿಯೂರಿನ ಕಾಲೇಜಿಗೆ ಹೋಗಲು ಅವಕಾಶವನ್ನು ನೀಡಿದ್ದಕ್ಕಾಗಿ ಮನದಲ್ಲೇ ಸಂತೋಷಪಡುತ್ತಾ ನಾಳೆಯಿಂದ ಸುಜಾತಳ ನೋಡಬಹುದು ಎಂದು ಅಂದು ಕೊಂಡವನ ಸಂತಸ ಬಹಳ ದಿನ ಉಳಿಯಲಿಲ್ಲ, ಒಂದು ವಾರದಿಂದ ಏಳು ಗಂಟೆ  ಜೈರಾಂ ಬಸ್ ಗೆ ಅವಳು ಹತ್ತಲಿಲ್ಲ .ಗಿರೀಶ ಕಾಲೇಜಿನ ಮುಂದೆ ದಿನವೂ ಕಾದರೂ ಅವಳ ಸುಳಿವಿಲ್ಲ 

ಸತೀಶ ಬಹಳ ಬೇಸರದಿಂದ ತನ್ನಲ್ಲೇ ಪ್ರಶ್ನೆ ಮಾಡಿಕೊಂಡ 

"ಎಲ್ಲಿ ಹೋದಳು ಸುಜಾತ?"


ಮುಂದುವರೆಯುವುದು....




ಸಿ ಜಿ ವೆಂಕಟೇಶ್ವರ






No comments: