17 June 2020

ಸನ್ಮಾರ್ಗ ಭಾಗ ೮



ಸನ್ಮಾರ್ಗ ಭಾಗ ೮

ಜೀತದ ನೋವು

"ಅಣ್ಣ ಬ್ಯಾಡಣ್ಣ ಬಿಟ್ ಬಿಡಣ್ಣ ಹೋಗ್ತಿನಣ್ಣ ಅಣ್ಣ ಉರಿಯುತ್ತೆ ಬಿಡಣ್ಣ ಅಣ್ಣ.. ನಿನ್ ಕೈಮುಗಿತಿನಿ ಬಿಡಣ್ಣ, ಕಾಲಿಗ್ ಬೀಳ್ತಿನಿ ಬಿಡಣ್ಣ,, ಅಣ್ಣ ಹೋಗ್ತಿನಣ್ಣ,ಈಗಲೆ ಹೋಗ್ತಿನಣ್ಣ " ಎಂದು ಗುರುಸಿದ್ದ ದೈನೇಶಿಯಾಗಿ ಅಳುತ್ತಾ ಬೇಡುತ್ತಿದ್ದರೂ ಕರುಣೆಯಿಲ್ಲದೆ, ನಿರ್ಧಯಿಯಾಗಿ ಹಸಿ ಕೋಲಿನಿಂದ ಬಾಯಲ್ಲಿ ಟವಲ್ ಕೊಚ್ಚಿಕೊಂಡು ಒಂದು ಕೈಯಲ್ಲಿ ಗುರುಸಿದ್ದನ ಕೈಹಿಡಿದು ಮತ್ತೊಂದು ಕೈಯಲ್ಲಿ ಶಕ್ತಿಮೀರಿ ಆ ಹುಡುಗನ ಮೇಲೆ ಒಂದೇ ಸಮನೆ ಬಾರಿಸುತ್ತಿದ್ದ ಬಿಳಿಯಪ್ಪ . ಆ ಹುಡುಗನ ಅರಚಾಟ ಕೇಳಿ ಹೊರಬಂದ ಪಕ್ಕದ ಮನೆಯ ಈರಮ್ಮ ಹೇ ಬಿಡೋ  ಬಿಳಿಯಣ್ಣ ಆ ಮಗಿನ್ಯಾಕೆ ಅಂಗೆ  ಹೊಡಿತಿಯಾ? ಎಂದಾಗ "ನಿನ್ಗೇನು ಬೇಕು ಸುಮ್ನೆ ಹೋಗಮ್ಮ ಎಂದಾಗ " ನೀನು ಸೀಮ್ಯಾಗಿಲ್ದಾನು ಬಿಡಪ್ಪ"
ಎನ್ನತ್ತಾ ಒಳಗೆ ಹೋದರು ಈರಮ್ಮ .
ಅಷ್ಟಕ್ಕೂ ಆ ಹುಡುಗ ಮಾಡಿದ ಅಪರಾಧವಾದರೂ ಏನು ? ವಯಸ್ಸಿನಲ್ಲಿ ಹನ್ನೆರಡೋ ಹದಿನಾಲ್ಕೊ ವರ್ಷ ಇರಬಹುದು,   ತೂಕಹಾಕಿದರೂ ಮೂರು ಕೆಜಿ ಮಾಂಸ ಇರಬಹುದು, ಗಾಳಿ ಬಂದರೆ ತೂರಿಕೊಂಡು ಹೋಗೋ ತರ ಇದಾನೆ ,ಕರಿಬಣ್ಣದ ಮೂರೂವರೆ ಅಡಿ ಎತ್ತರದ ಈ ಹುಡುಗ ಅವರಪ್ಪ ದೊಡ್ಡಪ್ಪಗಳ ಹತ್ತಿರ ಸಾಲ ಮಾಡಿ ತೀರಿಸಿ ತೀರಿಕೊಂಡಿದ್ದರೆ ತನ್ನಷ್ಟೆ ವಯಸ್ಕ ಮಕ್ಕಳೊಂದಿಗೆ ‌ಆಟವಾಡುತ್ತಾ ನಲಿಯುತ್ತಿದ್ದ ,ಶಾಲೆಗೆ ಹೋಗಿ ನಾಲ್ಕಕ್ಷರ ಕಲಿಯುತ್ತಿದ್ದ ,ಅವರಪ್ಪನ ಕುಡಿತದ ಚಟಕ್ಕೆ ಮಾಡಿದ ಸಾಲಕ್ಕೆ ಮಗ ಇಂದು ಇವರ ಮನೆಯಲ್ಲಿ ಸಂಬಳ ( ಜೀತ) ಇರಬೇಕಾಗಿದೆ .
ಬೆಳಗಿನ ಕೋಳಿಕೂಗಿದಾಗ ಆರಂಭವಾಗುವ ಇವನ ದಿನಚರಿ ರಾತ್ರಿ ಒಂಭತ್ತೂವರೆವರೆಗೂ  ಮುಂದುವರೆದು .ಅಲ್ಲೇ ಮೂಲೆಯಲ್ಲಿ ಹರಿದ ಕಂಬಳಿ ಹಾಕಿಕೊಂಡು ಅದನ್ನೇ ಹೊದ್ದು ಕಾಲು ಮುದುರಿ  ಮಲಗಿದರೆ ಯಾರೂ ನನ್ನ ಬೆಳಿಗ್ಗೆವರೆಗೆ ಏಳಿಸದಿದ್ದರೆ ಸಾಕು ದೇವರೆ ಎಂದು ಕೈಕಾಲು ಒಂದೆಡೆ ಮಾಡಿ ಮುದುರಿಕೊಂಡು ಮಲಗುತ್ತಿದ್ದ.
ಮನದಲ್ಲಿ ದುಗುಡವಿದ್ದರೂ ನಗುತ್ತಲೆ ಇರುತ್ತಿದ್ದ ಗುರುಸಿದ್ದ ಬೆಳಿಗ್ಗೆ ಎದ್ದಕೂಡಲೆ ತಲೆಗೊಂದು ಹಳೆಯ ಟವಲ್ನಿಂದ ಪೇಟ ಸುತ್ತಿಕೊಂಡು ,ಒಂದು ಈಚಲಮರದ ತಟ್ಟಿಯನ್ನು ತೆಗೆದುಕೊಂಡು ಅದರಲ್ಲಿಸಗಣಿ ಅಂಟದಿರಲು ಸ್ವಲ್ಪ ಹುಲ್ಲು ಅಥವಾ ಸ್ವಲ್ಪ ಸೊಪ್ಪು ಹಾಕಿ ಸಗಣಿ ತುಂಬಿ ಸತೀಶನನ್ನು ಕರೆದು ತಲೆಮೇಲೆ ಅದನ್ನು ಇಟ್ಟು ಕೊಳ್ಳಲು ಅವನಿಂದ ಸಹಾಯ ಪಡೆದು ಸುಮಾರು ೨೦೦ ಮೀಟರ್ ಇರುವ ತಿಪ್ಪೆಗೆ ಹಾಕಿ ಬರುತ್ತಿದ್ದ . ನಂತರ ದನಗಳ ಗಂಜಲ ಒಂದು ಮೂಲೆಯಲ್ಲಿ ಸಂಗ್ರಹವಾಗಿ ಅಸಹ್ಯವಾದ ವಾಸನೆ ಬರುತ್ತಿತ್ತು ,ಅದಕ್ಕಾಗಿಯೆ ಇದ್ದ ಒಂದು ಗಡಿಗೆ ತೆಗೆದುಕೊಂಡು ಅದರ ಜೊತೆಗೆ ಒಂದು ತೂತಿಲ್ಲದ ತೆಂಗಿನ ಚಿಪ್ಪು  ತೆಗೆದುಕೊಂಡು ಅದರ ಸಹಾಯದಿಂದ ಕಮಟು ವಾಸನೆ ಬರುವ ಆ ದ್ರವವನ್ನು ಗಡಿಗೆಯಲ್ಲಿ ತುಂಬಿ ತಲೆಯ ಮೇಲಿಟ್ಟು ತಿಪ್ಪೆಗೆ ಸಾಗಿಸುತ್ತಿದ್ದ .ಮತ್ತೆ ಹಿಂದಿರುಗಿ ಬಂದು ತೆಂಗಿನ ಗರಿಯಿಂದ ಮಾಡಿದ ಪೊರಕೆಯನ್ನು ತೆಗೆದುಕೊಂಡು ಚೆನ್ನಾಗಿ ಕಸ ಹೊಡೆದು ಅದನ್ನೂ ತಟ್ಟಿಯಲ್ಲಿ  ತುಂಬಿ ತಿಪ್ಪೆಗೆ ಹಾಕುತ್ತಿದ್ದ .ಕೆಲವೊಮ್ಮೆ ಈ ಕೆಲಸಕ್ಕೆ ಸತೀಶ ಸಹಾಯ ಮಾಡುತ್ತಿದ್ದ . ಸತೀಶನ ಶಾಲೆಯ ಪರೀಕ್ಷೆಯ ದಿನಗಳಲ್ಲಿ ಅದೂ ಸಾದ್ಯವಾಗುತ್ತಿರಲಿಲ್ಲ . ಇಷ್ಟು ಕೆಲಸ ಮಾಡುವ ಹೊತ್ತಿಗೆ ಮೂಡಣದಲ್ಲಿ ರವಿರಾಯ ಮಾರಮ್ಮನ ದೇವಸ್ಥಾನದ ಮೇಲಿನಿಂದ ನಿಧಾನವಾಗಿ ಮೇಲಿರುತ್ತಿದ್ದ. ಆಗ ತಿಮ್ಮಕ್ಕ ಗುರುಸಿದ್ದನಿಗೆ ಅವನಿಗೆ ನಿಗಧಿಯಾದ ಅಲ್ಯೂಮಿನಿಯಂ ಲೋಟದಲ್ಲಿ ಮೇಲಿನಿಂದ  ಕಾಪಿ ಒಯ್ಯುತ್ತಿದ್ದರು. ಎಷ್ಟೇ ಬಿಸಿಯಿದ್ದರೂ ಮೇಲಿಂದ ಸುರಿಯುವ ರಭಸಕ್ಕೆ ಬಿಸಿ ಕಡಿಮೆಯಾಗಿ ಎರಡೇ ಸಲಕ್ಕೆ ಸೊರ್....., ಎಂದು ಸದ್ದು ಮಾಡಿ ಕಾಪಿ ಕುಡಿದ ಶಾಸ್ತ್ರ ಮಾಡಿ .ಎಮ್ಮೆ ಕರುಗಳಿಗೆ ಹಸಿ ಹುಲ್ಲು ತರಲು ಕುಡುಗೋಲು, ಹಗ್ಗ , ತೆಗೆದುಕೊಂಡು ಹೊಲಕ್ಕೆ ಹೊರಟೇ ಬಿಡುತ್ತಿದ್ದ . ಬಿಸಿಲು ಬಲಿಯುವ ಮೊದಲು ಹುಲ್ಲಿನ ಹೊರೆಯೊಂದಿಗೆ ಹಿಂತಿರುಗಿ ಅವನದೇ ನಜ್ಜುಗುಜ್ಜಾದ, ಅಲ್ಯುಮಿನಿಯಮ್ ತಟ್ಟೆಯಲ್ಲಿ ಆರಿದ ಮುದ್ದೆ ಮತ್ತು ಸಾರು ಉಂಡು ,ದನಗಳ ಕಣ್ಣಿ ಬಿಚ್ಚಿ ಕೈಯಲ್ಲೊಂದು ಕೋಲಿಡಿದು  "ಉಯ್ಯ... ...ಆ ....ಎಮ್ಮಿಗೇನು ಪ್ರಜ್ಞೆ ಇಲ್ಲ ಎತ್ಲಗೋತ್ತದು ಹೇ ಬಿಡ್ತಿನ್ನೋಡು ಈಗ " ಎಂದು ಆ ಮೂಕ ಪ್ರಾಣಿಗಳ ಜೊತೆಗೆ ಅವನದೇ ಭಾಷೆಯಲ್ಲಿ ಮಾತನಾಡುತ್ತ ಊರ ಬಾಗಿಲು ದಾಟಿ ಪ್ರಾಣಿಗಳ ಜೊತೆ ನಾನೂ ಮಾತನಾಡುವ ಪ್ರಾಣಿ ಎಂಬಂತೆ ನಿಧಾನವಾಗಿ ಊರಿನಿಂದ  ಮರೆಯಾಗುತ್ತಿದ್ದ.
ದಿನವೂ ಅದೇ ದಿನಚರಿ ಯಾಂತ್ರಿಕವಾಗಿ ನಡೆದಿತ್ತು .ಆದರೆ ಅಂದು ಮಾತ್ರ ಯಡವಟ್ಟಾಗಿತ್ತು ಹೊಲದಿಂದ ಹಸಿರು ಮೇವು ತರುವಾಗ ರಸ್ತೆಯ ಪಕ್ಕದಲ್ಲಿ ಜನ‌ ಗುಂಪುಗೂಡಿದ್ದರು ಉರುಮೆಯ ಸದ್ದು ಕೇಳುತ್ತಿತ್ತು ಹುಲ್ಲು ಹೊರೆ ಅಲ್ಲೇ ಇಳಿಸಿ  ಗುಂಪಿನ ಕಡೆ ಹೋದ . ಇವನಿಗಿಂತ ಚಿಕ್ಕ ವಯಸ್ಸಿನ ಹುಡುಗಿ ಚಿಕ್ಕ ಬಳೆಯಲ್ಲಿ ಇಡೀ ದೇಹ ಸೇರಿಸುವುದು , ಬಳೆಯಿಂದ ಬಿಡಿಸಿಕೊಳ್ಳುವುದು ಹೀಗೆ ಕಸರತ್ತು ಮಾಡುತ್ತಿತ್ತು ಅದಕ್ಕೆ ತಂದೆ ಮಾರ್ಗದರ್ಶನ ನೀಡುತ್ತಿದ್ದರು, ಇದನ್ನು ನೋಡಿದ  ಜನರು ಚಪ್ಪಾಳೆ ,ಶಿಳ್ಳೆ ಹೊಡೆಯುತ್ತಿದ್ದರು.
ಗುರುಸಿದ್ದನಿಗೆ ಈ ಚಮತ್ಕಾರ   ನೋಡುತ್ತಾ ,ಸಮಯದ ಪರಿವೆಯಿಲ್ಲದೆ ನಿಂತ ,ಎಡಕ್ಕೆ ತಿರುಗಿ ನೋಡಿದರೆ ಪೂಜಾರ ಮನೆ ಎಮ್ಮೆ ಮೇಯಲು ಹೊಲದ ಕಡೆ ಗೊರಟಿದ್ದವು "ಏನಾ ಗುರುಸಿದ್ದ ಬರಲ್ಲೇನಾ ಎಮ್ಮೆ ಮೇಸಾಕೆ ? " ಕೇಳಿದ ತನಗಿಂತ ಒಂದು ವರ್ಷ ದೊಡ್ಡ ವಯಸ್ಸಿನ ರವಿ ಅವನೂ ಪೂಜಾರ ಮನೆಯಲ್ಲಿ ಸಂಬಳಕ್ಕಿದ್ದ.
ಅಯ್ಯೋ....  ಕೆಟ್ಟೆ ಎಂದು ದಿಗಿಲಾಗಿ ದೊಡ್ಡಪ್ಪಗಳ ಮನೆಯ ಕಡೆ ಬಂದ, ಆಗಲೆ ಬಿಳಿಯಣ್ಣನ ರೌದ್ರಾವತಾರ ಬಯಲಾದದ್ದು .ಬಿಸಿಲಿನಲ್ಲಿ ಎಮ್ಮೆ ಹಸುಗಳು ಏದುಸಿರು ಬಿಡುವದು ಕಂಡು ಹಸಿಯ  ಬರಲು ತೆಗೆದುಕೊಂಡು ಗುರುಸಿದ್ದನಿಗೆ ಬಾರಿಸಿಯೇ ಬಿಟ್ಟಿದ್ದ ಬಿಳಿಯಪ್ಪ.
ಬೆಳಗಿನ  ಊಟ ಮಾಡದೆ ಅಳುತ್ತಲೆ ದನಗಳ ಹೊಡೆದು ಕೊಂಡು ಹೋದ ಅವನೂ ಹಸಿದಿದ್ದ ದನಗಳೂ ದನಗಳಾದರೂ ಹೊಲದಲ್ಲಿ ಮೇದು ಹೊಟ್ಟೆ ತುಂಬಿಸಿಕೊಳ್ಳುವ ಆಶಾಭಾವದಿಂದ ಸರಸರನೆ ನಡೆದರೆ ,ಆ ಹುಡುಗ ಬಾಸುಂಡೆ ಬಂದ ಕಡೆ ಕೈಯಲ್ಲಿ ತಡವಿಕೊಂಡು ನೋಡಿಕೊಳ್ಳತ್ತಾ, ಕೊಳಕಾದ ಟವಲಿನಿಂದ ಕಣ್ಣೀರ ವರಸಿಕೊಳ್ಳುತ್ತಾ, ಬಿಕ್ಕಿ ಬಿಕ್ಕಿ ಅಳುತ್ತಾ ಸಾಗುವಾಗ ಊರ ಕೆಲವರು ಕಾರಣ ಕೇಳಿದರೂ , ಯಾರಲ್ಲೂ ಮಾತನಾಡದೆ ಮುಂದೆ ಹೋದ .
ಅವನನ್ನು ಕಾಡಿದ ಒಂದೇ ಪ್ರಶ್ನೆ ನನಗೇಕೆ ಈ ಶಿಕ್ಷೆ? ಇದಕ್ಕೆ ಕಾರಣ ಕೆಲ ಕಾಲ ಮೈ ಮರೆತು ಕಸರತ್ತು ನೋಡಿದ ನಾನ?  ಕುಡಿಯಲು ಸಾಲ ಮಾಡಿ ಸತ್ತ  ನಮ್ಮಪ್ಪನಾ? ನಿರ್ದಯವಾಗಿ ನನ್ನ ಸಂಬಳಕ್ಕೆ ಬಿಟ್ಟು ಹೋದ ಅವ್ವಾನಾ? ಮನುಷ್ಯತ್ವ ಇಲ್ಲದೆ ಮೃಗದಂತೆ ವರ್ತಿಸಿದ ಬಿಳಿಯಪ್ಪ ನಾ? ಈಗೇ ನೂರಾರು ಪ್ರಶ್ನೆಗಳು ಮನದಲ್ಲಿ ಮೂಡುತ್ತಾ ನಿಸ್ತೇಜನಾಗಿ ನಡೆಯುವಾಗ "ಹೇ ಕಡ್ಲೇಕಾಯಿ ಹೊಲ್ದಾಗೆ ಎಮ್ಮೆ ಮೇದ್ರು ಏನ್ ಮಾಡ್ತಿಯೋ ಕತ್ತೆ ಬಡವ ಹೊಡ್ಕಳ ಅದನ್ನ ,ಒಕ್ಕಲ್ತನ ಮಾಡಿದ್ದರೆ ಗೊತ್ತಗಿರೋದು ನಿಮ್ಮ ಜಾತಿಗೇನು ಗೊತ್ತಾಗುತ್ತೆ ಬೇಸಾಯ ಮಾಡೋರ್ ಕಷ್ಟ"
ಬೈಯುತ್ತಲೇ ಇದ್ದ  ಹೇಮಣ್ಣ ಮತ್ತೆ ದುಃಖ ಒತ್ತರಿಸಿ ಬಂದು ಮತ್ತೆ ಪ್ರಶ್ನೆಗಳೇಳತೊಡಗಿದವು.
ಅದೇ ಕಾಲಕ್ಕೆ ಊರಲ್ಲಿ  ಈರಮ್ಮನ ಮನದಲ್ಲೂ ಅದೆ ಪ್ರಶ್ನೆಗಳು ????.
ಅಷ್ಟಕ್ಕೂ ಆ ಹುಡುಗ ಮಾಡಿದ ತಪ್ಪಾದರೂ ಏನು? ಕೀಳು ಜಾತಿಯಲ್ಲಿ ಹುಟ್ಟಿದ್ದೆ ತಪ್ಪಾ? ಎಲ್ಲಿದೆ  ಮೇಲು ಜಾತಿ? ದೇವರ ಮುಂದೆ ಎಲ್ಲಾ ಒಂದೆ ಅಲ್ಲವೇ? ಬದುಕಿದ್ದಾಗ  ಸತ್ತಾಗ ಎಲ್ಲರಿಗೂ ಒಂದೇ ಮಣ್ಣಲ್ಲವೆ? ಸೂರ್ಯನ ಬೆಳಕು, ಗಾಳಿ , ಮಳೆ ಎಂದಾದರೂ ಬೇಧ ಮಾಡುವುದೆ ? ಏನೂ ಅರಿಯದ ಆ ಹುಡುಗನ ಆ ರೀತಿ ಹೊಡೆದ ಬಿಳಿಯಪ್ಪ ಮುನುಷ್ಯನೇ ಎಂದು ಬೇಸರಪಡುತ್ತಲೆ ಬೂದಿ ಹಾಕಿ ಪಾತ್ರೆಗಳನ್ನು ತೊಳೆಯತೊಡಗಿದಳು.ಎಷ್ಟೇ ತಿಕ್ಕಿ ತೊಳೆದರೂ ಪಾತ್ರೆಗಳು ಯಾಕೋ ಸಂಪೂರ್ಣವಾಗಿ  ಸ್ವಚ್ಚವಾದಂತೆ ಕಾಣಲಿಲ್ಲ .... ಮನುಷ್ಯರ ಮನಸ್ಸು ಸ್ವಚ್ಛವಾಗಲು ಇನ್ನೂ ಎಷ್ಟು ದಿನ‌ವಾದರೂ ಆಗಲಿಲ್ಲ , ಈ ಪಾತ್ರೆಗಳದು ಯಾವ ಲೆಕ್ಕ..
ಎಂದು ಯೋಚಿಸುತ್ತಾ ಪಾತ್ರೆಗಳನ್ನು ತೆಗೆದುಕೊಂಡು ಮನೆಯ ಅಡುಗೆ ಮನೆ ಕಡೆ ಹೊರಟರು...
ಮುಂದುವರೆಯುವುದು.
ಸಿ‌ ಜಿ ವೆಂಕಟೇಶ್ವರ

No comments: