29 September 2018

ಗಜಲ್47(ಭಗತ್ ಸಿಂಗ್)

                  *ಗಜಲ್*

ದೇಶಭಕ್ತರಾದ  ಭಗತ್ ಸಿಂಗ್ ಹೆಸರು ಕೇಳಿದರೇನೋ ಪುಳಕ
ಇನ್ ಕ್ವಿಲಾಬ್ ಜಿಂದಾಬಾದ್  ಎಂದವನ ನೆನೆದರೇನೋ ಪುಳಕ

ಮದುವೆ ಮಕ್ಕಳಾದರೆ ಮಾತ್ರ ಜೀವನವೆಂದರು
ಬಾಲ್ಯವಿವಾಹ ಧಿಕ್ಕರಿಸಿದ ಧೀರನ ಸ್ಮರಿಸಿದರೇನೋ ಪುಳಕ

ಬದುಕಲು ನೂರಾರು ವೇಷ ಬಣ್ಣ ಹಚ್ಚದೇ ನಟನೆ
ಬಾಲ್ಯದಿ ರಾಣಾಪ್ರತಾಪ್ ಚಂದ್ರ ಗುಪ್ತರ ಪಾತ್ರ ಅಭಿನಯ ಸವಿದರೇನೋ ಪುಳಕ

ಅನವಶ್ಯಕ ರಕ್ತದೋಕುಳಿ‌ಹರಿಯುತಿದೆ ಪ್ರತಿದಿನ
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಮಣ್ಣನು ಪೂಜಿಸಿದವನ ಭಜಿಸಿದರೇನೋ ಪುಳಕ

ಗೊತ್ತು ಗುರಿಯಿಲ್ಲ ಇಂದಿನ ಯುವ ಪೀಳಿಗೆಗೆ
ಚಿಂತನೆಯ ಕೊಲ್ಲಲಾಗದು ಸ್ಪೂರ್ತಿ ಹೊಸಕಲಾಗದೆಂದು ಕರೆನೀಡಿದವನ ನೋಡಿದರೇನೋ ಪುಳಕ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

No comments: